ಉದಯವಾಹಿನಿ, ಮೀರತ್ (ಉತ್ತರ ಪ್ರದೇಶ): ಜವಳಿ ವ್ಯಾಪಾರಿಯೊಬ್ಬರ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಐದು ಮಕ್ಕಳು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಮೀರತ್ನ ಲಿಸಾಡಿ ಗೇಟ್ ಪ್ರದೇಶದಲ್ಲಿ ಸೋಮವಾರ ನಡೆದ ಈ ಘಟನೆಯಲ್ಲಿ ಮತ್ತೊಬ್ಬ ಮಹಿಳೆ ಕೂಡ ಗಾಯಗೊಂಡಿದ್ದಾರೆ.ಹೃದಯ ವಿದ್ರಾವಕ ಎನ್ನುವಂತೆ ಘಟನೆಯಲ್ಲಿ ಆರು ತಿಂಗಳ ಅವಳಿಗಳು ಸಹ ಸಾವನ್ನಪ್ಪಿದ್ದಾರೆ. ಮಾಹಿತಿ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳವು ಸತತ ಪ್ರಯತ್ನದ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದೆ.
ಮೃತರನ್ನು ಅಸಿಮ್ ಅವರ ಪತ್ನಿ ರುಖ್ಸಾರ್ (30), ಮಗ ಅಕಾದ್ದೂಸ್ (3), ಮಗಳು ನಬಿಯಾ (6 ತಿಂಗಳು), ಮಗಳು ಇನಾಯತ್ (6 ತಿಂಗಳು), ಫಾರೂಕ್ ಅವರ ಮಗಳು ಮಹ್ವಿಶ್ (12) ಫಾರೂಕ್ ಅವರ ಮಗ ಹಮ್ಮಾದ್ (4) ಎಂದು ಗುರುತಿಸಲಾಗಿದೆ. ಇಕ್ಬಾಲ್ ಅವರ ತಾಯಿ ಅಮೀರ್ ಬಾನೋ (55) ಗಂಭೀರವಾದ ಸುಟ್ಟಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾರ್ಟ್ ಸರ್ಕ್ಯೂಟ್ ಕಾರಣ: ಘಟನೆ ಕುರಿತು ವಿವರ ನೀಡಿರುವ ನಗರ ಎಸ್ಪಿ ಆಯುಷ್ ವಿಕ್ರಮ್ ಸಿಂಗ್, ಕಿದ್ವಾಯಿ ನಗರದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಕರೆ ಬಂದಿತ್ತು. ಇದರ ಬೆನ್ನಲ್ಲೇ ಅಗ್ನಿಶಾಮಕ ದಳ ಮತ್ತು ಪೊಲೀಸ್ ತಂಡ ತಕ್ಷಣ ಸ್ಥಳಕ್ಕೆ ಆಗಮಿಸಿತ್ತು. ಮನೆಗೆ ಹೋಗುವ ರಸ್ತೆ ಕಿರಿದಾಗಿದ್ದು, ಅಗ್ನಿಶಾಮಕ ದಳದ ತಂಡವು ನೆರೆಹೊರೆಯವರ ಛಾವಣಿಗಳಿಂದ ಮನೆಯೊಳಗೆ ಪ್ರವೇಶಿಸಬೇಕಾಯಿತು. ಬೆಂಕಿಯನ್ನು ಸಾಕಷ್ಟು ಕಷ್ಟಪಟ್ಟು ನಿಯಂತ್ರಣಕ್ಕೆ ತರಲಾಗಿದೆ. ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದವರನ್ನು ಸ್ಥಳಾಂತರಿಸಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿ ಅನುಸಾರ, ಮನೆಯಲ್ಲಿ ಈ ದುರಂತಕ್ಕೆ ಕಾರಣ ಶಾರ್ಟ್ ಸರ್ಕ್ಯೂಟ್ ಎಂದು ಕಂಡು ಬಂದಿದೆ. ಈ ಮನೆಯಲ್ಲಿ ಜವಳಿ ಕಾರ್ಖಾನೆಯೂ ಇತ್ತು ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಉದ್ಯಮಿ ಇಕ್ಬಾಲ್ ಅಹ್ಮದ್ ತನ್ನ ಕುಟುಂಬದೊಂದಿಗೆ ಮೂರು ಅಂತಸ್ತಿನ ಮನೆಯಲ್ಲಿ ವಾಸಿಸುತ್ತಿದ್ದರು. ಅವರಿಬ್ಬರ ಪುತ್ರರಾದ ಅಸಿಮ್ ಮತ್ತು ಫಾರೂಕ್ ಅವರ ಕುಟುಂಬವು ಅಲ್ಲಿ ನೆಲೆಸಿತ್ತು. ಮನೆಯಲ್ಲಿ ವಿದ್ಯುತ್ ಮಗ್ಗಗಳಿಂದ ನೂಲುವ ಕಾರ್ಖಾನೆಯೂ ಇದೆ. ದಂಪತಿಯ ಕುಟುಂಬವು ಎರಡನೇ ಮಹಡಿಯಲ್ಲಿ ವಾಸಿಸುತ್ತಿದ್ದರು, ಈ ದುರಂತದ ಸಮಯದಲ್ಲಿ ಇಕ್ಬಾಲ್ ಅಹ್ಮದ್ ಮತ್ತು ಅವರ ಇಬ್ಬರು ಪುತ್ರರಾದ ಅಸಿಮ್ ಮತ್ತು ಫಾರೂಕ್ ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ಹೋಗಿದ್ದರು. ಮನೆಯಲ್ಲಿ ಇಕ್ಬಾಲ್ ಅಹ್ಮದ್ ಅವರ ಪತ್ನಿ ಅಮೀರ್ ಬಾನೋ, ಅಸಿಮ್ ಅವರ ಪತ್ನಿ ರುಖ್ಸಾರ್, ಅವರ ಮಗ ಅಖ್ದಾಸ್, ಇಬ್ಬರು ಅವಳಿ ಹೆಣ್ಣುಮಕ್ಕಳಾದ ನಬಿಯಾ ಮತ್ತು ಇನಾಯತ್, ಎರಡನೇ ಸಹೋದರ ಫಾರೂಕ್ ಅವರ ಮಗಳು ಮಹ್ವಿಶ್ ಮತ್ತು ಮಗ ಹಮ್ಮಾದ್ ಮನೆಯಲ್ಲಿದ್ದು, ಅವರ ತಾಯಿ ಹೊರತಾಗಿ ಎಲ್ಲರೂ ಸಾವನ್ನಪ್ಪಿದ್ದಾರೆ.
