ಉದಯವಾಹಿನಿ, ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಂದು (ಫೆ.28) ರಾಜಸ್ಥಾನ ಹಾಗೂ ಗುಜರಾತ್ ರಾಜ್ಯಗಳಿಗೆ ಭೇಟಿ ನೀಡಿ, 37,000 ಕೋಟಿ ರೂ.ಗೂ ಅಧಿಕ ಮೌಲ್ಯದ ಯೋಜನೆಗಳನ್ನು ಉದ್ಘಾಟನೆ ಮಾಡಲಿದ್ದಾರೆ. ಮೊದಲು ರಾಜಸ್ಥಾನಕ್ಕೆ ಭೇಟಿ ನೀಡಲಿರುವ ಅವರು 16,680 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟನೆ ಮಾಡಲಿದ್ದಾರೆ. ನಗರಾಭಿವೃದ್ಧಿ, ಶುದ್ಧ ಕುಡಿಯುವ ನೀರು, ರಸ್ತೆ ಜಾಲಗಳು, ನೀರಾವರಿ, ಇಂಧನ ಮತ್ತು ಕೈಗಾರಿಕಾ ಮೂಲಸೌಕರ್ಯಗಳಿಗೆ ಚಾಲನೆ ನೀಡಲಿದ್ದಾರೆ. ಜೊತೆಗೆ ಅಮೃತಸರ-ಜಾಮ್‌ನಗರ ಆರ್ಥಿಕ ಕಾರಿಡಾರ್‌ನ ಒಂದು ಭಾಗವಾದ ಜೈಪುರ ಮತ್ತು ಬಂಡಿಕುಯಿ ನಡುವಿನ 4-ಪಥದ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ ವೇ, ದೆಹಲಿ-ವಡೋದರಾ ಎಕ್ಸ್‌ಪ್ರೆಸ್‌ ವೇಯ 8-ಪಥದ ವಿಭಾಗ, ಜೋಧ್‌ಪುರದಲ್ಲಿ 4-ಪಥದ ಎತ್ತರದ ರಸ್ತೆ ಮತ್ತು ಬರಾನ್ ಜಿಲ್ಲೆಯಲ್ಲಿ ಹೊಸ ರಾಜ್ಯ ಹೆದ್ದಾರಿಗೆ ಅಡಿಪಾಯಕ್ಕೆ ಚಾಲನೆ ನೀಡಲಿದ್ದಾರೆ.

ಇದೇ ವೇಳೆ ಐದು 220 ಕೆವಿ ಮತ್ತು ಎರಡು 400 ಕೆವಿ ಗ್ರಿಡ್ ಸಬ್‌ಸ್ಟೇಷನ್‌ಗಳಿಗೆ ಅಡಿಪಾಯ, ರಾಜಸ್ಥಾನದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಹೊಸದಾಗಿ ಆಯ್ಕೆಯಾದ 21,800ಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರಗಳನ್ನು ಪ್ರದಾನ ಮಾಡಲಿದ್ದಾರೆ. ಇನ್ನೂ ಇದೇ ವೇಳೆ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ರಾಷ್ಟ್ರವ್ಯಾಪಿ ಹೆಚ್‌ಪಿವಿ ಲಸಿಕೆ ಅಭಿಯಾನ ಪ್ರಾರಂಭಿಸಲಿದ್ದಾರೆ. ರಾಜಸ್ಥಾನ ಭೇಟಿ ಬಳಿಕ ಗುಜರಾತ್‌ನ ಸನಂದ್‌ನಲ್ಲಿ ದೇಶದ ಮೊದಲ ದೊಡ್ಡ ಸೆಮಿಕಂಡಕ್ಟರ್ ಅಸೆಂಬ್ಲಿ ಸೌಲಭ್ಯ ಉದ್ಘಾಟನೆ ಮಾಡಲಿದ್ದಾರೆ. 22,500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಸೆಮಿಕಂಡಕ್ಟರ್ ಅಸೆಂಬ್ಲಿ ಇದಾಗಿದೆ. ಕಾರ್ಯಕ್ರಮದ ಬಳಿಕ ಪ್ರಧಾನಿ ನರೇಂದ್ರ ಮೋದಿ ಚೆನ್ನೈಗೆ ಪ್ರಯಾಣ ಬೆಳೆಸಲಿದ್ದಾರೆ. ನಾಳೆ (ಮಾ.1) ತಮಿಳುನಾಡು ಮತ್ತು ಪುದುಚೇರಿಗೆ ಭೇಟಿ ನೀಡಲಿದ್ದು, ಚುನಾವಣಾ ರಾಜ್ಯಗಳ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ

Leave a Reply

Your email address will not be published. Required fields are marked *

error: Content is protected !!