ಉದಯವಾಹಿನಿ, ಶ್ರೀಶೈಲ: ಆಂಧ್ರಪ್ರದೇಶದ ಪ್ರಸಿದ್ದ ಕ್ಷೇತ್ರವಾದ ಶ್ರೀಶೈಲದಲ್ಲಿ ಮಾರ್ಚ್ 16ರಿಂದ 20ರವರೆಗೆ ಯುಗಾದಿ ಮಹೋತ್ಸವಗಳ ಆಚರಣೆ ಮಾಡಲಾಗುತ್ತದೆ. ಉತ್ಸವ ಪ್ರಾರಂಭವಾಗುವ ಮೊದಲು (ಮಾರ್ಚ್ 06ರಿಂದ 15ರವರೆಗೆ) 10 ದಿನಗಳವರೆಗೆ ಪ್ರತಿದಿನ ನಿರ್ದಿಷ್ಟ ಸಮಯಗಳಲ್ಲಿ ನಾಲ್ಕು ಹಂತಗಳಾಗಿ ಮಲ್ಲಿಕಾರ್ಜುನ ಸ್ವಾಮಿಯನ್ನು ಸ್ಪರ್ಶಿಸುವ ಸ್ಪರ್ಶ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಪೋತುಗುಂಟ ರಮೇಶ್ ನಾಯುಡು ಮತ್ತು ಸ್ಪೆಷಲ್ ಗ್ರೇಡ್ ಡೆಪ್ಯುಟಿ ಕಲೆಕ್ಟರ್ ದೇವಸ್ಥಾನ ಕಾರ್ಯನಿರ್ವಾಹಣಾ ಅಧಿಕಾರಿ ಎಂ. ಶ್ರೀನಿವಾಸ ರಾವ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುಗಾದಿ ಮಹೋತ್ಸವ ಮಾರ್ಚ್ 16 ರಿಂದ 20ರ ವೇಳೆ ಎಲ್ಲಾ ಭಕ್ತರಿಗೆ ಶ್ರೀಮಲ್ಲಿಕಾರ್ಜುನ ಅಲಂಕಾರದ ದರ್ಶನ (ಲಘು ದರ್ಶನ) ಮಾತ್ರ ಒದಗಿಸಲಾಗುವುದು. ಹಬ್ಬದ ದಿನಗಳಲ್ಲಿ ಭಗವಂತನ ಸ್ಪರ್ಶ ದರ್ಶನ ಅವಕಾಶವಿರುವುದಿಲ್ಲ. ಯುಗಾದಿ ಹಬ್ಬದ ವೇಳೆ 7 ಲಕ್ಷದಿಂದ 8 ಲಕ್ಷ ಭಕ್ತರು ಶ್ರೀಶೈಲ ಕ್ಷೇತ್ರವನ್ನು ಸಂದರ್ಶಿಸಬಹುದೆಂದು ಭಾವಿಸಲಾಗಿದೆ. ಕರ್ನಾಟಕ ರಾಜ್ಯದಿಂದ, ವಿಶೇಷವಾಗಿ ಉತ್ತರ ಕರ್ನಾಟಕ ಪ್ರದೇಶದಿಂದ ಮತ್ತು ಮಹಾರಾಷ್ಟ್ರ ರಾಜ್ಯದ ಸೋಲಾಪುರ ಮತ್ತು ಸಾಂಗ್ಲಿಯಂತಹ ಸ್ಥಳಗಳಿಂದ ಭಕ್ತರು ಈ ಉತ್ಸವಗಳಿಗೆ ಶ್ರೀಶೈಲಕ್ಕೆ ಬರುತ್ತಾರೆ. ಇನ್ನು ಸ್ಪರ್ಶ ದರ್ಶನದ ಟಿಕೆಟ್ ಶುಲ್ಕವನ್ನು 500 ರೂ. ಎಂದು ನಿಗದಿಪಡಿಸಲಾಗಿದೆ. ಪ್ರತಿ ಹಂತದಲ್ಲಿ, ಕರೆಂಟ್ ಬುಕಿಂಗ್ ಮೂಲಕ ಕೇವಲ 1,500 ಟಿಕೆಟ್ಗಳನ್ನು ನೀಡಲಾಗುವುದು. ಅದೇ ರೀತಿ, ಇನ್ನೂ 500 ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.
