ಉದಯವಾಹಿನಿ, ಹಾವೇರಿ: ಇರಾನ್ ಮತ್ತು ಇಸ್ರೇಲ್ ಯುದ್ಧದ ಪರಿಣಾಮ ಹಲವು ಕೊಲ್ಲಿ ರಾಷ್ಟ್ರದಲ್ಲಿ ಸಿಲುಕಿ ಕನ್ನಡಿಗರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದೇ ರೀತಿ ಹಾವೇರಿ ಮೂಲದ ಟೆಕ್ಕಿ ಕುಟುಂಬವೊಂದು ಅಬುಧಾಬಿಯಲ್ಲಿ ಸಿಲುಕಿಕೊಂಡಿದೆ. ಸ್ನಾನಗೃಹದ ಮೇಲ್ಛಾವಣಿ ಕುಸಿದು ಬಿದ್ದಿದೆ. ಬಾಗಿಲು ವೇಗವಾಗಿ ಅಲುಗಾಡುತ್ತಿವೆ. ಇಲ್ಲಿ ನಮಗೆ ಬಹಳ ಭಯವಾಗುತ್ತಿದ್ದು, ನಮ್ಮನ್ನು ಭಾರತಕ್ಕೆ ಕರೆಸಿಕೊಳ್ಳಲು ವ್ಯವಸ್ಥೆ ಮಾಡಬೇಕು ಎಂದು ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದ ಎಂಜಿನಿಯರ್ ರಾಘವೇಂದ್ರ ಕುದುರಿ ಆತಂಕ ವ್ಯಕ್ತಪಡಿಸಿದ್ದಾರೆ.
ಸದ್ಯ ಯುಇಎ ಅಬುಧಾಬಿಯಲ್ಲಿ ಕುಟುಂಬದೊಂದಿಗೆ ನೆಲೆಸಿರುವ ರಾಘವೇಂದ್ರ ಕುದರಿ ಮಾತನಾಡಿ, ಅಲ್ಲಿರುವ ಪರಿಸ್ಥಿತಿಯನ್ನು ವಿವರಿಸಿದರು. ಮೊದಲು ನಾನೊಬ್ಬನೇ ಅಬುಧಾಬಿಯಲ್ಲಿ ನೆಲೆಸಿದ್ದೆ. ಒಂದು ತಿಂಗಳ ಹಿಂದಷ್ಟೇ ಪತ್ನಿ, ಇಬ್ಬರು ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದೇನೆ. ಇಲ್ಲಿನ ಪರಿಸ್ಥಿತಿ ಬಹಳಷ್ಟು ಗಂಭೀರವಾಗಿದೆ. ನಾವಿರುವ ಕಟ್ಟಡದ ಮೇಲೆ ಕ್ಷಿಪಣಿ ದಾಳಿ ನಡೆದ ದೃಶ್ಯ ನೋಡಿ ಕೆಲ ಹೊತ್ತು ಭಯಗೊಂಡಿದ್ದೆವು ಎಂದರು.
