ಉದಯವಾಹಿನಿ, ಮೋತಿಹಾರಿ(ಬಿಹಾರ): ಹೋಳಿ ಹಬ್ಬದ ಸಂಭ್ರಮದಲ್ಲಿ ದುರಂತ ಸಂಭವಿಸಿದೆ. ಆರು ಮಕ್ಕಳು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿಯಲ್ಲಿ, ಮಂಗಳವಾರ ಸಂಜೆ ಆರು ಮಕ್ಕಳು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕೇಸಾರಿಯಾ ಪೊಲೀಸ್ ಠಾಣೆ ಪ್ರದೇಶದ ರಖಾವಾ ಪಂಚಾಯತ್‌ನಲ್ಲಿ ವ್ಯಾಪ್ತಿಯ ರಾಘವ ನದಿಯಲ್ಲಿ ಸ್ನಾನ ಮಾಡುವಾಗ ದುರಂತ ಸಂಭವಿಸಿದೆ. ಘಟನೆಯ ಸುದ್ದಿ ತಿಳಿದ ತಕ್ಷಣ, ಗ್ರಾಮದಲ್ಲಿ ಶೋಕ ಮಡುಗಟ್ಟಿತ್ತು.ಸ್ಥಳೀಯರ ಪ್ರಕಾರ, ಎಲ್ಲಾ ಮಕ್ಕಳು ಮಧ್ಯಾಹ್ನ ರಾಘವ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದರು. ಒಂದು ಮಗು ಆಳವಾದ ನೀರಿಗೆ ಹೋಗಿ ಮುಳುಗಲು ಪ್ರಾರಂಭಿಸಿತು. ಅವನನ್ನು ಉಳಿಸಲು ಪ್ರಯತ್ನಿಸುತ್ತಿದ್ದಾಗ, ಆರು ಮಕ್ಕಳು ಒಬ್ಬೊಬ್ಬರಾಗಿ ಮುಳುಗಿ ಸಾವನ್ನಪ್ಪಿದರು. ನದಿಯ ದಡದಲ್ಲಿದ್ದ ಜನರು ಮಕ್ಕಳು ಮುಳುಗುತ್ತಿರುವುದನ್ನು ನೋಡಿ ಎಚ್ಚರಿಕೆ ನೀಡಿದರು. ಹತ್ತಿರದ ಜನರು ರಕ್ಷಣೆಗೆ ಬರುವ ಹೊತ್ತಿಗೆ, ಎಲ್ಲಾ ಮಕ್ಕಳು ನೀರುಪಾಲಾಗಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಆಡಳಿತ ಮತ್ತು ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿತು. ತೀವ್ರ ಪ್ರಯತ್ನದ ನಂತರ, ಗ್ರಾಮಸ್ಥರು ಮತ್ತು ಡೈವರ್‌ಗಳ ಸಹಾಯದಿಂದ, ಎಲ್ಲಾ ಮಕ್ಕಳ ಶವಗಳನ್ನು ಒಂದೊಂದಾಗಿ ನದಿಯಿಂದ ಹೊರತೆಗೆಯಲಾಗಿದೆ. ಮೃತದೇಹಗಳು ಪತ್ತೆಯಾಗುತ್ತಿದ್ದಂತೆಯೇ ಅವರ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮವೇ ಶೋಕದಲ್ಲಿ ಮುಳುಗಿದೆ.

ನೀರಿನಲ್ಲಿ ಮುಳುಗಿದ ಮಕ್ಕಳಲ್ಲಿ ಐವರು ಹುಡುಗಿಯರು ಮತ್ತು ಒಬ್ಬ ಹುಡುಗ ಸೇರಿದ್ದಾರೆ. ಮೃತರಲ್ಲಿ ಧರ್ಮೇಂದ್ರ ಸಾಹ್ನಿಯ 12 ವರ್ಷದ ದೀಕ್ಷಾ ಕುಮಾರಿ, 6 ವರ್ಷದ ಪ್ರಿಯಾ ಕುಮಾರಿ ಮತ್ತು 9 ವರ್ಷದ ಸೋನಾಕ್ಷಿ ಕುಮಾರಿ, ಮೂವರು ಸಹೋದರಿಯರು ಸೇರಿದ್ದಾರೆ. 12 ವರ್ಷದ ಸೋನಾಲಿ ಕುಮಾರಿ, 11 ವರ್ಷದ ಪ್ರಿನ್ಸ್ ಕುಮಾರ್ ಮತ್ತು 8 ವರ್ಷದ ಛೋಟಿ ಕುಮಾರಿ ಮೃತರು.

ಘಟನೆಯ ನಂತರ ಇಡೀ ರಖಾವಾ ಪಂಚಾಯತ್ ಶೋಕ ಸಾಗರದಲ್ಲಿ ಮುಳುಗಿದೆ. ಕುಟುಂಬ ಸದಸ್ಯರು ಮಕ್ಕಳನ್ನು ಕಳೆದುಕೊಂಡು ತೀವ್ರ ದುಃಖದಲ್ಲಿದ್ದಾರೆ. ಎಲ್ಲಾ ಮೃತದೇಹಗಳನ್ನು ಪತ್ತೆಹಚ್ಚಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೇಸಾರಿಯಾ ಪೊಲೀಸ್ ಠಾಣೆ ಮುಖ್ಯಸ್ಥರು ತಿಳಿಸಿದ್ದಾರೆ. ಇಂತಹ ದುರಂತ ಘಟನೆಗಳನ್ನು ತಡೆಗಟ್ಟಲು ನದಿ ಅಥವಾ ಕೊಳದಲ್ಲಿ ಸ್ನಾನ ಮಾಡಲು ಮಕ್ಕಳನ್ನು ಒಂಟಿಯಾಗಿ ಕಳುಹಿಸಬೇಡಿ ಎಂದು ಆಡಳಿತವು ಸಾರ್ವಜನಿಕರಿಗೆ ಮನವಿ ಮಾಡಿದೆ.

Leave a Reply

Your email address will not be published. Required fields are marked *

error: Content is protected !!