ಉದಯವಾಹಿನಿ, ಭೋಪಾಲ್: ವ್ಯಕ್ತಿಯೊಬ್ಬ ಬಾಲಕನನ್ನು ಸುತ್ತಿಗೆಯಿಂದ ಹೊಡೆದು ಕೊಂದು, ಆತನ ರಕ್ತ ಕುಡಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಸಮನ್ನಾ ಗ್ರಾಮದಲ್ಲಿ ನಡೆದಿದೆ.
ಹತ್ಯೆಯಾದ ಬಾಲಕನನ್ನು ಭರತ್ ವಿಶ್ವಕರ್ಮ (16) ಎಂದು ಗುರುತಿಸಲಾಗಿದೆ. ಈತ ಭಾಯಿ ದೂಜ್ ಹಬ್ಬಕ್ಕಾಗಿ ತನ್ನ ಸಹೋದರಿಯನ್ನು ಭೇಟಿ ಮಾಡಲು ತೆರಳುತ್ತಿದ್ದಾಗ ಗುಡ್ಡ ಪಟೇಲ್ ಎಂಬಾತ ಸುತ್ತಿಗೆಯಲ್ಲಿ ದಾಳಿ ನಡೆಸಿದ್ದಾನೆ. ಬಳಿಕ ಆತನ ರಕ್ತ ಕುಡಿದು, ಮಾಂಸ ಸೇವಿಸಲು ಯತ್ನಿಸಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಜನರ ಗುಂಪು ತಮ್ಮ ಕಣ್ಣ ಮುಂದೆಯೇ ನಡೆದ ಈ ಭಯಾನಕ ಘಟನೆಯನ್ನು ವೀಕ್ಷಿಸಿದ್ದಾರೆ. ಘಟನೆಯ ದೃಶ್ಯಗಳನ್ನು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ. ಘಟನೆಯ ನಂತರ ಪರಾರಿಯಾಗಿದ್ದ ಆರೋಪಿ ಗುಡ್ಡ ಪಟೇಲ್ನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಗುರುವಾರ (ಮಾ.5) ಮಧ್ಯಾಹ್ನ 1:30ರ ಸುಮಾರಿಗೆ ಬಾಲಕನನ್ನು ಹಿಂದಿನಿಂದ ಹೊಂಚು ಹಾಕಿ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದ. ನೆಲಕ್ಕೆ ಬಿದ್ದ ಬಳಿಕ ಬಾಲಕನಿಗೆ ಸುತ್ತಿಗೆಯಿಂದ ಪದೇ ಪದೇ ಹೊಡೆದು ಮಾರಣಾಂತಿಕ ಗಾಯ ಮಾಡಿದ್ದ. ಬಾಲಕ ಸಾವನ್ನಪ್ಪಿದ ಬಳಿಕ ಆತನ ರಕ್ತ ಕುಡಿದು, ಮಾಂಸ ಸೇವಿಸಲು ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
