ಉದಯವಾಹಿನಿ, ಬೆಂಗಳೂರು: ಸಾರಿಗೆ ಇಲಾಖೆಯಲ್ಲಿ ಲಿಪಿಕ ವರ್ಗದ ನೌಕರರು ಬಡ್ತಿ ಪಡೆಯಲು ನಕಲಿ ಡಿಪ್ಲೊಮಾ ಪ್ರಮಾಣಪತ್ರ ನೀಡಿದ ಆರೋಪವಿದ್ದು, ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ವಿಧಾನಪರಿಷತ್ನಲ್ಲಿ ಇಂದು ಶಾಸಕ ಟಿ.ಎ.ಶರವಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇಲ್ಲಿ ಸಾರಿಗೆ ಇಲಾಖೆ ಮಾತ್ರವಲ್ಲ, ತಾಂತ್ರಿಕ ಶಿಕ್ಷಣ ಇಲಾಖೆಯೂ ಅಕ್ರಮದಲ್ಲಿ ಭಾಗಿಯಾಗಿರುವುದು ಗೊತ್ತಾಗುತ್ತಿದೆ. ಹೀಗಾಗಿ, ನಿವೃತ್ತ ನ್ಯಾಯಾಧೀಶರಾದ ನಾರಾಯಣ ಎಂಬವರನ್ನು ಈಗಾಗಲೇ ನೇಮಿಸಿ ಗೆಜೆಟ್ ನೋಟಿಫಿಕೇಶನ್ ಮಾಡಲಾಗಿದೆ ಎಂದು ಹೇಳಿದರು.
ಶಾಸಕ ಶರವಣ ಮಾತನಾಡಿ, ಕೆಸಿಎಸ್ಆರ್ ಕಾಯ್ದೆಯಂತೆ ನಕಲಿ ಪ್ರಮಾಣಪತ್ರ ನೀಡಿದವರ ಮೇಲೂ ಕ್ರಮವಾಗಬೇಕು. ಮೈಸೂರು, ಬೆಳಗಾವಿಯಲ್ಲಿ ಪರೀಕ್ಷೆ ಬರೆದು ಕೇವಲ ಒಂದು ಗಂಟೆಯಲ್ಲಿ ಬೆಂಗಳೂರಿಗೆ ಬಂದು ಪರೀಕ್ಷೆ ಬರೆಯಲು ಹೇಗೆ ಸಾಧ್ಯ? ಇವರಿಗೆ ಹೇಗೆ ಪ್ರಮಾಣ ಪತ್ರ ಕೊಡಲಾಯಿತು? ಇದರ ಬಗ್ಗೆಯೂ ತನಿಖೆಯಾಗಿ ಕ್ರಮ ಆಗಬೇಕು. ಏಕೆಂದರೆ ಇಂದು ಉದ್ಯೋಗ ಸಮಸ್ಯೆಯಿಂದ ಸಾಕಷ್ಟು ಜನರಿಗೆ ತೊಂದರೆ ಆಗಿದೆ. ಸಾಕಷ್ಟು ಜನ ನೇಮಕಾತಿಗಾಗಿ ಕಾಯುತ್ತಿದ್ದಾರೆ. ಅವರಿಗೆಲ್ಲ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾರೆಡ್ಡಿ, ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಖಂಡಿತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಅಧಿಕಾರಿಗಳ ನಡೆಗೆ ಆಕ್ಷೇಪ: ಸಾರಿಗೆ ಇಲಾಖೆಯಲ್ಲಿ ಲಿಪಿಕ ನೌಕರರುಗಳು ಡಿಪ್ಲೋಮಾ ನಕಲಿ ಪ್ರಮಾಣಪತ್ರ ಪಡೆದುಕೊಂಡ ಬಗ್ಗೆ ಕಳೆದ ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ್ದೆ. ಆಗ ಸಂಪೂರ್ಣ ವರದಿ ಕೊಡಲು ಲೋಕಾಯುಕ್ತ ತನಿಖೆಗೆ ಆದೇಶಿಸುತ್ತೇನೆ ಎಂದಿದ್ದರು. ಇದರಂತೆ ಸಂಪೂರ್ಣ ದಾಖಲಾತಿ ನೀಡಿದ್ದೆ. ಆದರೆ, ಮೂರು ತಿಂಗಳು ಕಳೆದರೂ ನೌಕರರ ಮೇಲೆ ಯಾವುದೇ ತನಿಖೆಯಾಗಲಿ, ಕ್ರಮವಾಗಲಿ ಆಗಿಲ್ಲ. ಕೆಲ ದಿನಗಳ ಹಿಂದೆ ಅಕ್ರಮ ಎಸಗಿದವರಿಗೆ ನೆಪ ಮಾತ್ರಕ್ಕೆ ನೋಟಿಸ್ ಕೊಟ್ಟಿದ್ದಾರೆ ಎಂದು ಇದೇ ವೇಳೆ ಟಿ.ಎ.ಶರವಣ ಆರೋಪಿಸಿದರು.
ನೈಸ್ ರಸ್ತೆಯಲ್ಲಿ ದ್ವಿಚಕ್ರವಾಹನಗಳ ಮೇಲಿನ ಟೋಲ್ ರದ್ದತಿಗೆ ಚಿಂತನೆ: ನೈಸ್ ರಸ್ತೆ ಅಭಿವೃದ್ಧಿ ವೇಳೆ ಭೂಮಿ ನೀಡಿದ್ದ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ಟೌನ್ಶಿಪ್ ಕೂಡಾ ನಿರ್ಮಿಸಿಲ್ಲ. ಟೋಲ್ ದರ ಅಧಿಕವಾಗಿದ್ದು, ದ್ವಿಚಕ್ರ ವಾಹನಗಳಿಂದಲೂ ಟೋಲ್ ಸಂಗ್ರಹಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯ ರಾಮೋಜಿಗೌಡ ಆಕ್ರೋಶ ಹೊರಹಾಕಿದರು.
ಪ್ರಶ್ತೋತರ ಕಲಾಪದಲ್ಲಿ ಮಾತನಾಡಿದ ಅವರು, ನೈಸ್ ಕಂಪೆನಿ ಹಾಗೂ ಸರ್ಕಾರದ ನಡುವೆ ಗುತ್ತಿಗೆ ಅವಧಿ ಮುಗಿಯುತ್ತಾ ಬಂದರೂ ಭೂಮಿ ನೀಡಿದ ರೈತರಿಗೆ ಪರಿಹಾರ ದೊರೆತಿಲ್ಲ. ಷರತ್ತಿನಂತೆ ಟೌನ್ ಶಿಪ್ ನಿರ್ಮಾಣ ಮಾಡಿಲ್ಲ. ನೈಸ್ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಂದಲೂ ಟೋಲ್ ವಿಧಿಸಲಾಗುತ್ತಿದೆ. ಇದಲ್ಲದೆ ದ್ವಿಚಕ್ರ ವಾಹನಗಳಿಗೂ ಅಧಿಕ ಟೋಲ್ ಪಾವತಿಸಿಕೊಳ್ಳುವುದು ಸರಿಯಲ್ಲ ಎಂದರು.
