ಉದಯವಾಹಿನಿ, ಮುಂಬೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೂ ಮುನ್ನ ಟಿವಿಕೆ ಅಧ್ಯಕ್ಷ, ನಟ ವಿಜಯ್ ಮಹಾರಾಷ್ಟ್ರ ಶಿರಡಿ ಸಾಯಿಬಾಬಾ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದಾರೆ.ತಮಿಳುನಾಡು ವಿಧಾನಸಭಾ ಚುನಾವಣೆಗೆ ಏ.23ರಂದು ಮತದಾನ ನಡೆದಿದ್ದು, ಮೇ 4ರಂದು ಮತಎಣಿಕೆಯಾಗಿ ಫಲಿತಾಂಶ ಹೊರಬೀಳಲಿದೆ. ಇದರ ಮಧ್ಯೆ ಚುನಾವಣಾ ಫಲಿತಾಂಶಕ್ಕೂ ಮುನ್ನ ನಟ, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಅವರಿಂದು (ಏ.29) ಶಿರಡಿ ಸಾಯಿಬಾಬಾ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.
ಸಾಮಾಜಿಕ ಮಾಧ್ಯಮಗಳಲ್ಲಿ ನಟ ವಿಜಯ್ ಭೇಟಿಯ ಹಾಗೂ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿರುವ ವಿಡಿಯೋ ವೈರಲ್ ಆಗಿವೆ. ಇದಕ್ಕೂ ಮುನ್ನ ವಿಜಯ್ ತಮಿಳುನಾಡಿನ ತಿರುಚೆಂಡೂರ್ ಮುರುಗನ್ ದೇವಾಲಯಕ್ಕೂ ಭೇಟಿ ನೀಡಿದ್ದರು.ತಮಿಳುನಾಡು ಚುನಾವಣೋತ್ತರ ಸಮೀಕ್ಷೆಗಳು ಹೊರಬಂದಿದ್ದು, ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ಬಹುಮತ ನೀಡಿದೆ. ಇದರ ಹೊರತಾಗಿ ಬಹುತೇಕ ಸಮೀಕ್ಷೆಗಳು ಡಿಎಂಕೆಗೆ ಬಹುಮತ ನೀಡಿದೆ. ಹೀಗಾಗಿ ಹೊಸ ಪಕ್ಷ ಕಟ್ಟಿ ಇದೇ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿದಿರುವ ನಟ ಹಾಗೂ ಟಿವಿಕೆ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ ಫಲಿತಾಂಶದಲ್ಲಿ ಮ್ಯಾಜಿಕ್ ಮಾಡಿದ್ದಾರೆ ಎನ್ನಲಾಗಿದೆ. ತಾನು ಎದುರಿಸಿದ ಮೊದಲ ಚುನಾವಣೆಯಲ್ಲೇ ಪಟ್ಟಕೇರುವ ಸಾಧ್ಯತೆಗಳಿವೆ ಎಂದು ಚುನಾವಣೋತ್ತರ ಸಮೀಕ್ಷೆ ತಿಳಿಸಿದೆ.
