ಉದಯವಾಹಿನಿ, ನವದೆಹಲಿ: ರಾಷ್ಟ್ರ ರಾಜಧಾನಿಯ ಅಕ್ಬರ್ ರಸ್ತೆ ಹಾಗೂ ರೈಸೀನಾ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯನ್ನು ಖಾಲಿ ಮಾಡುವಂತೆ ಸರ್ಕಾರ ನೋಟಿಸ್ ನೀಡಿದೆ.ಮೂಲಗಳ ಪ್ರಕಾರ, ಆಸ್ತಿ ನಿರ್ವಹಣಾ ವಿಭಾಗ ಕಾಂಗ್ರೆಸ್ ಪಕ್ಷಕ್ಕೆ ನೋಟಿಸ್ ಜಾರಿ ಮಾಡಿದ್ದು, ಮಾ.28ರೊಳಗೆ 24 ಅಕ್ಬರ್ ರಸ್ತೆಯಲ್ಲಿರುವ ತಮ್ಮ ಕಚೇರಿಯನ್ನು ಖಾಲಿ ಮಾಡುವಂತೆ ತಿಳಿಸಿದೆ.
ಅಕ್ಬರ್ ರಸ್ತೆಯಲ್ಲಿರುವ ಈ ಕಟ್ಟಡವು ಸುಮಾರು ಐದು ದಶಕಗಳ ಕಾಲ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸಿದೆ. ಆದರೆ ಕಾಂಗ್ರೆಸ್ ಪಕ್ಷವು ಕಳೆದ ವರ್ಷ ಜ.15ರಂದು ಈ ಪ್ರಧಾನ ಕಚೇರಿಯನ್ನು 9ಂ ಕೋಟ್ಲಾ ರಸ್ತೆಯಲ್ಲಿರುವ ಇಂದಿರಾ ಭವನಕ್ಕೆ ಸ್ಥಳಾಂತರಿಸಿದೆ. ಆದರೆ ಅಕ್ಬರ್ ರಸ್ತೆಯ ಆವರಣವನ್ನು ಇನ್ನೂ ತೆರವುಗೊಳಿಸಿಲ್ಲ, ಜೊತೆಗೆ ಪಕ್ಷದ ಚಟುವಟಿಕೆಗಳು ಕೂಡ ನಡೆಯುತ್ತಿವೆ. ಇದರ ಜೊತೆಗೆ ರೈಸಿನಾ ರಸ್ತೆಯ 5ರಲ್ಲಿರುವ ಯುವ ಕಾಂಗ್ರೆಸ್ ಕಚೇರಿಯನ್ನು ತೆರವುಗೊಳಿಸುವಂತೆ ನೋಟಿಸ್ ನೀಡಿದ್ದಾರೆ. 2015ರಲ್ಲಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಾಂಗ್ರೆಸ್ ಪಕ್ಷಕ್ಕೆ ನೀಡಲಾಗಿದ್ದ ನಾಲ್ಕು ಬಂಗಲೆಗಳ ಹಂಚಿಕೆಯನ್ನು ರದ್ದುಗೊಳಿಸಿತ್ತು. ಅದರಲ್ಲಿ 24 ಅಕ್ಬರ್ ರಸ್ತೆಯೂ ಒಂದು. ನೋಟಿಸ್ ಬಳಿಕ ಪಕ್ಷದೊಳಗೆ ಕಳವಳವನ್ನು ಹುಟ್ಟುಹಾಕಿದ್ದು, ಪರಿಸ್ಥಿತಿ ಮೊದಲಿಗಿಂತ ಹೆಚ್ಚು ಒತ್ತಡದಿಂದ ಕೂಡಿದೆ ಎಂದು ನಾಯಕರೊಬ್ಬರು ತಿಳಿಸಿದ್ದಾರೆ. ನೋಟಿಸ್ ಬೆನ್ನಲ್ಲೇ ಕಾಂಗ್ರೆಸ್ ಕೋರ್ಟ್ ಮೆಟ್ಟಿಲೇರಲು ಚಿಂತನೆ ನಡೆಸಿದ್ದು, ಇಲ್ಲದಿದ್ದಲ್ಲಿ ಸರ್ಕಾರದಿಂದ ಹೆಚ್ಚುವರಿ ಸಮಯವನ್ನು ಕೋರಲು ಚಿಂತನೆ ನಡೆಸಿದೆ ಎನ್ನಲಾಗಿದೆ.
