ಉದಯವಾಹಿನಿ, ರಾಯಚೂರು: ನಗರದ ಜ್ಯೋತಿ ಕಾಲೋನಿಯಲ್ಲಿ ಗೃಹಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.
ವಿದ್ಯಾ (30) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಗೃಹಿಣಿ. ನಗರದ ವಿಜ್ಞಾನ ಕೇಂದ್ರದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.ಮೃತ ವಿದ್ಯಾ ಎರಡು ವರ್ಷದ ಹಿಂದೆ ಮೆಡಿಕಲ್ ರೆಪ್ ಆಗಿರುವ ಮಂಜುನಾಥ ಜೊತೆ ಮದುವೆಯಾಗಿದ್ದರು. ಕಳೆದ ಆರು ತಿಂಗಳಿನಿಂದ ವರದಕ್ಷಿಣೆಗಾಗಿ ಪತಿ ಮಂಜುನಾಥ ಹಾಗೂ ಅತ್ತೆ ಕಿರುಕುಳ ನೀಡುತ್ತಿದ್ದರು. ಆರಂಭದಲ್ಲಿ ಕೆಲದಿನಗಳು ಮಾತ್ರ ಚೆನ್ನಾಗಿದ್ದು, ಬಳಿಕ ಕಿರುಕುಳ ನೀಡಲು ಶುರುಮಾಡಿದ್ದರು. ಜೊತೆಗೆ ಪತಿ ನಿತ್ಯ ಕುಡಿದು ಬಂದು ಕಿರುಕುಳ ನೀಡುತ್ತಿದ್ದ ಎಂದು ಮೃತಳ ಪೋಷಕರು ಆರೋಪಿದ್ದಾರೆ.
ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದಾಗಿ ಪತಿ ಮನೆಯವರು ಹೇಳಿದ್ದಾರೆ. ಆದರೆ ಗೃಹಿಣಿ ಪೋಷಕರು, ಪೊಲೀಸರು ಬರುವುದರೊಳಗೆ ಶವವನ್ನ ಕೆಳಗೆ ಇಳಿಸಿದ್ದಕ್ಕೆ ಅನುಮಾನ ವ್ಯಕ್ತವಾಗಿದೆ.ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
