ಉದಯವಾಹಿನಿ, ಮಡಿಕೇರಿ: ಸಿದ್ದಾಪುರದಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ಮಾಲ್ತಾರೆ ಗ್ರಾಮ ಸಮೀಪದ ಕುಶಾಲನಗರ ಹಾಗೂ ದೇವಮತಿ ಅರಣ್ಯ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಹುಲಿಯೊಂದು ಪ್ರಯಾಣಿಕರ ಕ್ಯಾಮರಾದಲ್ಲಿ ಸೆರೆಯಾಗಿದೆ.ಮೈಸೂರಿನತ್ತ ಪ್ರಯಾಣಿಸುತ್ತಿದ್ದ ವಾಹನ ಸವಾರರು ಈ ಅಪರೂಪದ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.
ಮಾಹಿತಿಯ ಪ್ರಕಾರ, ಮಾಲ್ತಾರೆ ಗ್ರಾಮ ವ್ಯಾಪ್ತಿಯ ದೇವಮತಿ ಅರಣ್ಯದ ಒಳಭಾಗದಲ್ಲಿ ರಸ್ತೆ ದಾಟುತ್ತಿದ್ದ ಹುಲಿ ಕೆಲ ಹೊತ್ತಿನವರೆಗೆ ವಾಹನಗಳ ಮುಂದೆ ಕಾಣಿಸಿಕೊಂಡಿದೆ. ಅರಣ್ಯ ಪ್ರದೇಶವಾಗಿರುವುದರಿಂದ ವಾಹನ ಸವಾರರು ಕ್ಷಣಕಾಲ ನಿಂತು ಹುಲಿಯನ್ನ ಗಮನಿಸಿದ್ದು, ಬಳಿಕ ಅದು ಮರಗಳ ಮಧ್ಯೆ ಕಣ್ಮರೆಯಾಗಿದೆ. ಈ ಘಟನೆ ಸ್ಥಳೀಯರಲ್ಲಿ ಕುತೂಹಲದ ಜತೆಗೆ ಸ್ವಲ್ಪ ಆತಂಕವನ್ನೂ ಉಂಟುಮಾಡಿದೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಕಾಡುಜೀವಿಗಳ ಸಂಚಾರ ಹೆಚ್ಚಾಗಿದೆ ಎನ್ನುವ ಮಾತು ಕೇಳಿಬರುತ್ತಿದ್ದು, ಹುಲಿ ಪ್ರತ್ಯಕ್ಷವಾದ ಘಟನೆ ಇದಕ್ಕೆ ಮತ್ತಷ್ಟು ಬಲ ನೀಡಿದೆ.
