ಉದಯವಾಹಿನಿ, ನವದೆಹಲಿ: ಬಳ್ಳಾರಿ-ಸಿರುಗುಪ್ಪ-ಸಿಂಧನೂರು ಹಾಗೂ ಲಿಂಗಸುಗೂರು ರೈಲ್ವೆ ಮಾರ್ಗದ ಆರಂಭಕ್ಕೆ ಇದೇ ಸಾಲಿನ ರೈಲ್ವೆ ಬಜೆಟ್ನಲ್ಲಿ ಮಂಜೂರಾತಿ ನೀಡುವಂತೆ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರಿಗೆ ರೈಲ್ವೆ ಕ್ರಿಯಾ ಸಮಿತಿಯ ನಿಯೋಗ ಮನವಿ ಮಾಡಿದೆ.
ದೆಹಲಿಯಲ್ಲಿ ಭೇಟಿ ಮಾಡಿದ ನಿಯೋಗ, ಮೊದಲನೇ ಹಂತದಲ್ಲಿ ನೂತನ ರೈಲ್ವೆ ಮಾರ್ಗ ಬಳ್ಳಾರಿಯಿಂದ ಸಿಂಧನೂರಿನವರೆಗೆ ರಚನೆಯಾದಲ್ಲಿ ಬಳ್ಳಾರಿ ಸಿಂಧನೂರಿನ ಅಂತರ ಕೇವಲ 70 ಕಿ.ಮೀ ಆಗುತ್ತದೆ. ಈ ಮಾರ್ಗದ ರಚನೆಯಿಂದ ಚಾಮರಾಜನಗರ, ಮೈಸೂರು, ಹಾಸನ, ಅರಸೀಕೆರೆ, ಚಿತ್ರದುರ್ಗ, ಬಳ್ಳಾರಿ, ರಾಯಚೂರು ಮೂಲಕ ಬೀದರ್ವರೆಗೆ 950 ಕಿ.ಮೀ ಅಂತರದ ಕರ್ನಾಟಕ ರಾಜ್ಯದ ಉದ್ದನೆಯ ರೈಲ್ವೆ ಮಾರ್ಗವಾಗಲಿದೆ ಎಂದು ಹಣಕಾಸು ಸಚಿವರಿಗೆ ತಿಳಿಸಲಾಗಿದೆ.
ಸಿರುಗುಪ್ಪದಲ್ಲಿ ಬೆಳೆಯುವ ಉತ್ತಮ ತಳಿಯ ಅಕ್ಕಿಯನ್ನು ರೈತರು ದೇಶದ ನಾನಾ ಭಾಗಗಳಿಗೆ ರೈಲಿನ ಮೂಲಕ ಸಾಗಾಣಿಕೆ ಮಾಡಲು ಅನುಕೂಲವಾಗುವುದಲ್ಲದೆ ಗೂಡ್ಸ್ಗಳ ಸಾಗಾಣಿಕೆಯಿಂದ ರೈಲ್ವೆ ಇಲಾಖೆಗೆ ಆದಾಯ ಬರುವುದರೊಂದಿಗೆ ಈ ಭಾಗದ ಪ್ರಯಾಣಿಕರಿಗೆ ರೈಲ್ವೆ ಸೌಲಭ್ಯ ದೊರೆಯುವುದೆಂದು ವಿವರಿಸಲಾಗಿದೆ.
ಬಹುದಿನದ ಪ್ರಯಾಣಿಕರ ಬೇಡಿಕೆಯಾಗಿರುವ ಬಳ್ಳಾರಿ ಮಾರ್ಗದಲ್ಲಿ ವಂದೇ ಭಾರತ್ ಇಲ್ಲ, ಸೂಪರ್ ಫಾಸ್ಟ್ ಜನಶತಾಬ್ದಿ ಅಥವಾ ಇಂಟರ್ ಸಿಟಿ ರೈಲನ್ನು ಬೆಂಗಳೂರಿನವರೆಗೆ ನೂತನ ರೈಲನ್ನು ಆರಂಭಿಸುವಂತೆ ಹಾಗೂ ಬಳ್ಳಾರಿ ಮಾರ್ಗದಲ್ಲಿ ನಿಲುಗಡೆಯಾಗಿರುವ ಕೊಲ್ಲಾಪುರ, ಮುನಗೂರು, ಶಿವಮೊಗ್ಗ, ಚೆನ್ನೈ ರೈಲುಗಳ ಪುನರಾರಂಭಕ್ಕೆ ರೈಲ್ವೆ ಮಂತ್ರಿಗಳಿಗೆ ಶಿಫಾರಸು ಮಾಡುವಂತೆ ನಿಯೋಗ ವಿನಂತಿಸಿದೆ.
