ಉದಯವಾಹಿನಿ, ಮಂಗಳೂರು: ನಗರದಲ್ಲಿ 5.5 ಟನ್ ಧಾರ್ಮಿಕ ತ್ಯಾಜ್ಯ ಸಂಗ್ರಹವಾಗಿದೆ. ರಾಮಕೃಷ್ಣ ಮಿಷನ್ ಕೇವಲ 10 ದಿನಗಳಲ್ಲಿ ಈ ಪ್ರಮಾಣದ ತ್ಯಾಜ್ಯವನ್ನು ಸಂಗ್ರಹಿಸಿದೆ.
ಮನೆಯಲ್ಲಿ ಪೂಜಿಸಲ್ಪಟ್ಟ ದೇವರ ಪೋಟೋ, ವಿಗ್ರಹ ಸೇರಿದಂತೆ ಧಾರ್ಮಿಕ ತ್ಯಾಜ್ಯಗಳನ್ನು ಎಲ್ಲೆಡೆ ಎಸೆಯಲಾಗುತ್ತದೆ. ದೇವಸ್ಥಾನದ ಆವರಣಗಳು, ಮರದ ಅಡಿಯಲ್ಲಿ ಎಸೆಯಲಾಗುತ್ತದೆ. ಇದರಿಂದಾಗಿ ಒಂದೆಡೆ ಧಾರ್ಮಿಕ ಭಾವನೆಗೂ ಅಡ್ಡಿ, ಇನ್ನೊಂದೆಡೆ ತ್ಯಾಜ್ಯ ಅಲ್ಲೇ ರಾಶಿಯಾಗುತ್ತಿದೆ. ಇದಕ್ಕೊಂದು ಪರಿಹಾರಕ್ಕಾಗಿ ಮಂಗಳೂರಿನ ರಾಮಕೃಷ್ಣ ಮಿಷನ್ ಧಾರ್ಮಿಕ ತ್ಯಾಜ್ಯಗಳನ್ನ ಗೌರವಯುತವಾಗಿ ವಿಸರ್ಜಿಸಲು ನಿರ್ಧರಿಸಿ, ಮಂಗಳೂರಿನ ಐದು ಕಡೆಗಳಲ್ಲಿ ಧಾರ್ಮಿಕ ಸಂಗ್ರಹಕ್ಕೆ ಬಾಕ್ಸ್ ಇಟ್ಟು ವ್ಯವಸ್ಥೆ ಮಾಡಿದ್ದರು. ಒಟ್ಟು 10 ದಿನಗಳಲ್ಲಿ ಬರೋಬ್ಬರಿ 5.5 ಟನ್ ಧಾರ್ಮಿಕ ತ್ಯಾಜ್ಯಗಳು ಸಂಗ್ರಹವಾಗಿದೆ. ಇದನ್ನ ಈಗ ಕಾಲೇಜು ವಿದ್ಯಾರ್ಥಿಗಳ ಸಹಕಾರದೊಂದಿಗೆ ನಗರದ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದಲ್ಲಿ ವಿಗಂಡಿಸಿ ಬಳಿಕ ಎಲ್ಲದಕ್ಕೂ ಪೂಜೆ ಮಾಡಿ ಭೂಮಿಯಲ್ಲಿ ಮಣ್ಣು ಮಾಡಲಾಗುವುದು. ಉಳಿದ ಫೋಟೋ, ಫ್ರೇಮ್ಗಳನ್ನು ಹೋಮಕ್ಕೆ ಆಹುತಿ ಹಾಕಲಾಗುವುದು.
