ಉದಯವಾಹಿನಿ, ರಾಯಚೂರು: ಬಿಸಿಲನಾಡು ರಾಯಚೂರು ಜಿಲ್ಲೆಯಲ್ಲಿ ಏಪ್ರಿಲ್ ತಿಂಗಳಲ್ಲೆ ಬಿಸಿಲಿನ ಅಬ್ಬರ ಬಲು ಜೋರಾಗಿದೆ. ಗರಿಷ್ಠ ತಾಪಮಾನ ಈಗಲೇ ದಾಖಲಾಗುತ್ತಿದ್ದು ಜನ ತತ್ತರಿಸಿ ಹೋಗಿದ್ದಾರೆ. ರೈತರ ಬಹುತೇಕ ಕೃಷಿ ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತಿದ್ದು, ಬಿಸಿಲಿನ ಅಬ್ಬರಕ್ಕೆ ಅನ್ನದಾತರು ಹೈರಾಣಾಗಿದ್ದಾರೆ. ರಾಯಚೂರಿನ ಎಪಿಎಂಸಿಯಲ್ಲಿ ಸುಡುಬಿಸಿಲಿನಲ್ಲೇ ತಮ್ಮ ಉತ್ಪನ್ನಗಳ ಮಾರಾಟ ಮಾಡುತ್ತಿದ್ದಾರೆ.

ರಾಯಚೂರು ಅಂದ್ರೆ ಬೇರೆ ಹೇಳಬೇಕಿಲ್ಲಾ ಇಲ್ಲಿ ಇರೋದೇ ಎರಡು ಕಾಲ. ಒಂದು ಬೇಸಿಗೆ ಕಾಲ, ಇನ್ನೊಂದು ಬಿರು ಬೇಸಿಗೆಕಾಲ. ಇಂತಹದ್ರಲ್ಲಿ ಈ ಬಾರಿ ಬಿಸಿಲಿನ ಅಬ್ಬರ ಏಪ್ರಿಲ್ ತಿಂಗಳಲ್ಲೇ ಜೋರಾಗಿದೆ.‌ ಈಗಾಗಲೇ ರಾಯಚೂರಿನಲ್ಲಿ ಗರಿಷ್ಠ ಉಷ್ಣಾಂಶ 44.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ತಾಪಮಾನದಲ್ಲಿ ಇನ್ನೂ ಹೆಚ್ಚಳದ ಸಾಧ್ಯತೆಯಿದೆ. ಆದ್ರೆ ಈಗ ರೈತರ ಬೆಳೆಗಳೆಲ್ಲಾ ಕಟಾವಾಗಿ ಮಾರುಕಟ್ಟೆಗೆ ಬರುತ್ತಿರುವ ಸಮಯ. ರಾಯಚೂರಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೇ ಬಿಸಿಲಿನ ತಾಪಮಾನಕ್ಕೆ ಇಲ್ಲಿಗೆ ಬರುವ ರೈತರು, ಹಮಾಲಿಗಳು, ದಲ್ಲಾಳಿಗಳು ತತ್ತರಿಸಿ ಹೋಗುತ್ತಿದ್ದಾರೆ. ಈಗಾಗಲೇ ಭತ್ತ, ಈರುಳ್ಳಿ, ಶೇಂಗಾ, ತೊಗರಿ, ಕುಸುಬೆ, ಮೆಕ್ಕೆ ಜೋಳ ಸೇರಿ ವಿವಿಧ ಕೃಷಿ ಉತ್ಪನ್ನಗಳು ಮಾರುಕಟ್ಟೆಗೆ ಬಂದಿದ್ದು ಬೆಲೆ ಬರುವವರೆಗೆ ಕಾದು ಮಾರಾಟ ಮಾಡಲು ರೈತರು ಬಿಸಿಲಲ್ಲಿ ಪರದಾಟ ನಡೆಸಿದ್ದಾರೆ. ರಾಯಚೂರಿನ ಎಪಿಎಂಸಿಯಲ್ಲಿ ನೀರಿನ ಟ್ಯಾಂಕ್ ಗಳಿದ್ದರೂ ನೀರಿನ ಸರಬರಾಜು ವ್ಯವಸ್ಥೆ ಇಲ್ಲಾ. ಪ್ರಾಂಗಣದ ಶೆಡ್ ಬಿಟ್ರೆ ಬಿಸಿಲಿನಿಂದ ತಪ್ಪಿಸಿಕೊಳ್ಳಲು ರೈತರು, ಹಮಾಲಿಗಳಿಗೆ ಬೇರೆ ವ್ಯವಸ್ಥೆಯಿಲ್ಲಾ. ಹೀಗಾಗಿ ಬಿಸಿಲಿನಿಂದ ತಪ್ಪಿಸಿಕೊಳ್ಳಲು ರೈತರು ತಲೆಯ ಮೇಲೆ ಟವಲ್ ಹಾಕಿಕೊಂಡು ಓಡಾಡುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!