ಉದಯವಾಹಿನಿ, ಬೆಂಗಳೂರು: ಸಂಪುಟ ಪುನರ್ ರಚನೆ ಮಾಡಬೇಕು ಅಂತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಮನವಿ ಮಾಡಿದ್ದೇವೆ ಎಂದು ಕಾಂಗ್ರೆಸ್ ಶಾಸಕ ಬಂಗಾರಪೇಟೆ ನಾರಾಯಣಸ್ವಾಮಿ ತಿಳಿಸಿದ್ದಾರೆ. ದೆಹಲಿಗೆ ಶಾಸಕರು ಹೋಗಿದ್ದ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ದೆಹಲಿಗೆ ಹೋಗಿ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ್ದೇವೆ. ಸಂಪುಟ ಪುನಾರಚನೆ ಮಾಡಬೇಕು ಎಂದು ಕೇಳಿದ್ದೇವೆ. ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಮೇ ಮೊದಲ ವಾರದಲ್ಲಿ ಪುನಾರಚನೆ ಮಾಡುತ್ತೇವೆ ಎಂದಿದ್ದಾರೆ. ಸಂಪುಟ ಪುನಾರಚನೆ ಸಿಎಂ ಪರಮಾಧಿಕಾರ. ಸಿಎಂ ಬಳಿ ಚರ್ಚಿಸುವುದಾಗಿ ಖರ್ಗೆ ಹೇಳಿದ್ದಾರೆ ಎಂದರು.
ನಾಯಕತ್ವ ಬದಲಾವಣೆ ಆಗಬೇಕು ಎಂಬ ವಿಚಾರ ಚರ್ಚೆ ಮಾಡಲಿಲ್ಲ. ನಾಯಕತ್ವ ಬದಲಾಣೆ ಮಾಡಿ ಎಂದು ನಾನು ಹೇಳಿಲ್ಲ. ನಾಯಕತ್ವ ಬದಲಾವಣೆ ವಿಚಾರ ಹೈಕಮಾಂಡ್‌ಗೆ ಬಿಟ್ಟ ವಿಚಾರ. ವಿಸ್ತರಣೆ ಮಾಡಿ ಎಂದು ಮಾತ್ರ ಕೇಳಿದ್ದೇವೆ ಎಂದು ಹೇಳಿದರು. ಅಲ್ಪಸಂಖ್ಯಾತ ನಾಯಕರ ವಿರುದ್ಧ ಕ್ರಮದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಜೀರ್, ಜಬ್ಬಾರ್, ಜಮೀರ್ ಪಕ್ಷ ವಿರೋಧಿ ಮಾಡಿದ್ದಾರೆ ಎಂಬ ದಾಖಲೆಗಳು ಇಲ್ಲ. ಸಣ್ಣಪುಟ್ಟ ತಪ್ಪುಗಳನ್ನು ಸೀರಿಯಸ್ಸಾಗಿ ತಗೊಬಾರದು. ತಪ್ಪು ಮಾಡಿರೋದಕ್ಕೆ ದಾಖಲೆ ಇಲ್ಲ. ಹೈಕಮಾಂಡ್ ಬಳಿ ದಾಖಲೆ ಇರಬಹುದು. ಅವರು ಪಕ್ಷ ವಿರೋಧಿ ಮಾಡಿದ್ದಾರೆ ಅಂತ ನನಗೆ ಕಾಣಿಸುತ್ತಿಲ್ಲ.
ಹೈಕಮಾಂಡ್ ನಿರ್ಧಾರದ ವಿರುದ್ಧವಾಗಿ ಹೋಗುವುದಿಲ್ಲ. ಹೈಕಮಾಂಡ್ ಮಾಡಿರುವುದು ತಪ್ಪು ಎಂದು ನಾನು ಹೇಳುವುದಿಲ್ಲ. ಇಂತಹ ತಪ್ಪುಗಳನ್ನು ಹಿಂದೆ ಕ್ಷಮಿಸಿದ್ದಾರೆ. ತಪ್ಪು ಕ್ಷಮಿಸಿ ಹೈಕಮಾಂಡ್ ತಮ್ಮ ನಿರ್ಧಾರವನ್ನು ಪರಿಶೀಲಿಸಬಹುದು ಎಂದರು. ಅಹಿಂದ ಟಾರ್ಗೆಟ್ ಆಗಿದೆ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಸಿಎಂ ಬೆಂಬಲಿಗರ ವಿರುದ್ಧ ಮಾತ್ರ ಕ್ರಮ ಆಗುತ್ತಿದೆ ಎನ್ನುವುದನ್ನು ಒಪ್ಪುವುದಿಲ್ಲ. ಸಿದ್ದರಾಮಯ್ಯ ಯಾವತ್ತು ಅಸಹಾಯಕರಲ್ಲ, ಸಿಎಂ ಪರ ದಂಡು ನಾಯಕರೇ ಇದ್ದಾರೆ. ಬೇರೆ ಪಕ್ಷದಲ್ಲೂ ಸಿಎಂ ಬೆಂಬಲಿಸುವ ನಾಯಕರಿದ್ದಾರೆ. ಸಿಎಂ ವರ್ಚಸ್ಸು ಕಡಿಮೆ ಆಗಿಲ್ಲ, ಯಾವತ್ತು ಕಡಿಮೆ ಆಗುವುದಿಲ್ಲ ಎಂದು ಸಿಎಂ ಪರ ಬ್ಯಾಟ್ ಬೀಸಿದರು.

Leave a Reply

Your email address will not be published. Required fields are marked *

error: Content is protected !!