ಉದಯವಾಹಿನಿ, ಚಿಕ್ಕಬಳ್ಳಾಪುರ: ಕಳೆದ ಬಾರಿ ಬೆಲೆ ಕುಸಿತದಿಂದ ಕಂಗಾಲಾಗಿದ್ದ ಜಿಲ್ಲೆಯ ಬೆಳೆಗಾರರಿಗೆ ಈ ಬಾರಿ ದ್ರಾಕ್ಷಿ ಬೆಳೆ ಕೈ ಹಿಡಿದಿದೆ. ಅದರಲ್ಲೂ ದಿಲ್ ಖುಷ್ ದ್ರಾಕ್ಷಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿರುವುದರಿಂದ ಬೆಳೆಗಾರರ ಮೊಗದಲ್ಲಿ ನಗು ಅರಳಿದೆ.
ಹೌದು. ದ್ರಾಕ್ಷಿ ಬೆಳೆಯುವುದರಲ್ಲಿ ರಾಜ್ಯದಗಮನ ಸೆಳೆದಿರುವ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಸದ್ಯ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಹೂ, ಹಣ್ಣು, ತರಕಾರಿ ಬೆಳೆದಂತೆ ದ್ರಾಕ್ಷಿ ಬೆಳೆ ಕೂಡ ಬೆಳೆಯಲಾಗುತ್ತಿದೆ. ವಿವಿಧ ತಳಿಯ ದ್ರಾಕ್ಷಿ ಕೆಜಿ 40 ರಿಂದ ಹಿಡಿದು 140 ರೂ, ವರೆಗೂ ಮಾರಾಟ ಆಗುತ್ತಿವೆ. ಈಗಾಗಲೇ ಜಿಲ್ಲೆಯಲ್ಲಿ ಇರಾನ್ ಹಾಗೂ ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧದ (US-Israel vs Iran War) ಪರಿಣಾಮ ರೈತರು ಬೆಳೆದ ಆಲೂಗಡ್ಡೆ ಹಾಗೂ ಬೆಂಗಳೂರು ಗುಲಾಬಿ ಈರುಳ್ಳಿ ವಿದೇಶಗಳಿಗೆ ರಫ್ತು ಆಗದೇ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಆದರೆ ದ್ರಾಕ್ಷಿಗೆ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗುತ್ತಿರುವುದು ದ್ರಾಕ್ಷಿ ಬೆಳೆಗಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಕಳೆದ ವರ್ಷ ದಿಲ್ ಖುಷ್ ಕೆಜಿ 25, 30 ರೂಗೆ ಮಾರಾಟಗೊಂಡಿತು. ಆದರೆ ಈ ವರ್ಷ ಕೆಜಿ 40 ರೂ.ಗೆ ಮಾರಾಟ ಆಗುತ್ತಿದೆ. ಸದ್ಯ ಸಿಗುತ್ತಿರುವ ಬೆಲೆ ರೈತರಿಗೆ ಲಾಭವೇ ಹೊರತು ನಷ್ಟವಲ್ಲ. ಆದರೆ ಆಲಿಕಲ್ಲು ಹಾಗೂ ಅಕಾಲಿಕ ಮಳೆ ಬೀಳಬಾರದು ಅಷ್ಟೇ ಎನ್ನುತ್ತಾರೆ ದ್ರಾಕ್ಷಿ ಬೆಳೆಗಾರರಾದ ಚಿಕ್ಕಬಳ್ಳಾಪುರ ತಾಲೂಕಿನ ಮರಳುಕುಂಟೆ ಕೃಷ್ಣಮೂರ್ತಿ.
ಚಿಕ್ಕಬಳ್ಳಾಪುರ ತಾಲೂಕಿನ ರೈತರ ದ್ರಾಕ್ಷಿ ತೋಟಗಳತ್ತ ಕಣ್ಣಾಯಿಸಿ ನೋಡಿದರೆ ಗೊಂಚಲು ಗೊಂಚಲು ಕಟ್ಟಿರುವ ದ್ರಾಕ್ಷಿ ಗೊನೆಗಳು ಕಣ್ಣಿಗೆ ರಾಚುತ್ತವೆ. ಉತ್ತಮ ಫಸಲು ಬಂದಿದ್ದು ಅಲ್ಲಲ್ಲಿ ಕಟಾವು ಕೂಡ ಶುರುವಾಗಿದೆ. ಆದರೆ ರೈತರಿಗೆ ಆಲಿಕಲ್ಲು ಹಾಗೂ ಅಕಾಲಿಕ ಮಳೆಯದ್ದೇ ಆತಂಕವಾಗಿದೆ. ಕಳೆದ ಮಾರ್ಚ ತಿಂಗಳಲ್ಲಿ ಬಿದ್ದ ಆಲಿಕಲ್ಕು ಸಹಿತ ಬಿರುಗಾಳಿ ಮಳೆಗೆ ಅಪಾರ ಪ್ರಮಾಣದ ದ್ರಾಕ್ಷಿ ನೆಲಕಚ್ಚಿ ರೈತರಿಗೆ ಅಪಾರ ಆರ್ಥಿಕ ನಷ್ಟ ಉಂಟು ಮಾಡಿತು. ಇದೀಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದು ಇತಂಹ ಸಂದರ್ಭದಲ್ಲಿ ಅಕಾಲಿಕ ಮಳೆ ಅಥವ ಆಲಿಕಲ್ಲು ಮಳೆ ಬಿದ್ದರೆ ದ್ರಾಕ್ಷಿಗೆ ಹೆಚ್ಚು ಪೆಟ್ಟು ಬೀಳುತ್ತದೆ.
