ಉದಯವಾಹಿನಿ, ಬೆಂಗಳೂರು: ಬೆಂಗಳೂರಲ್ಲಿ ಸುರಿದ ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ ಮೂರು ಎಕರೆ ಬಾಳೆ ತೋಟ ಸಂಪೂರ್ಣವಾಗಿ ನೆಲಸಮವಾದ ಘಟನೆ ನೆಲಮಂಗಲ ತಾಲೂಕಿನ ಹಕ್ಕಿನಾಳು ಗ್ರಾಮದಲ್ಲಿ ನಡೆದಿದೆ. ರೈತ ಕೃಷ್ಣಪ್ಪ ಎಂಬುವವರಿಗೆ ಸೇರಿದ 3,000 ಬಾಳೆಗಿಡವಿದ್ದ ತೋಟ ಮಳೆಗೆ ಸಂಪೂರ್ಣವಾಗಿ ನೆಲಸಮವಾಗಿದೆ. ಹೆಂಡತಿಯ ಮಾಂಗಲ್ಯ ಸರ ಹಾಗೂ ಚಿನ್ನಾಭರಣ ಅಡವಿಟ್ಟು ಬಾಳೆ ಬೆಳೆದಿದ್ದು, ಮಳೆಗೆ ಬೆಳೆ ನಾಶವಾಗಿ ರೈತ ಕುಟುಂಬ ಕಣ್ಣೀರಿಡುತ್ತಿದೆ. ಸುಮಾರು 8-10 ಲಕ್ಷ ರೂಪಾಯಿ ವೆಚ್ಚದಲ್ಲಿ ಬಾಳೆ ಬೆಳೆಯಲಾಗಿತ್ತು. ಫಸಲು ಬಿಡುವ ವೇಳೆಯಲ್ಲಿ ಬಿರುಗಾಳಿ ಮಳೆಗೆ ಬಾಳೆ ಗಿಡಗಳು ಸಂಪೂರ್ಣವಾಗಿ ಧರೆಗುರುಳಿದೆ.
ರೈತ ಕೃಷ್ಣಪ್ಪ ಈ ಬಾರಿ ಸುಮಾರು 40 ರಿಂದ 45 ಲಕ್ಷ ರೂ. ಲಾಭದ ನಿರೀಕ್ಷೆಯಲ್ಲಿದ್ದರು. ಸದ್ಯ ಮಳೆಯಿಂದ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವ ಕೃಷ್ಣಪ್ಪ ಕುಟುಂಬ ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಕಣ್ಣೀರಿಟ್ಟಿದ್ದಾರೆ.
