ಉದಯವಾಹಿನಿ, ಬೆಂಗಳೂರು: ದೀರ್ಘಕಾಲದ ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಸಿಲಿಕಾನ್ ಸಿಟಿ ಜನತೆಗೆ ನಿನ್ನೆ ಸಂಜೆ ಸುರಿದ ಮಳೆ ತಂಪು ನೀಡಿತಾದರೂ, ಅದರ ಬೆನ್ನಲ್ಲೇ ಮಳೆರಾಯ ಭೀಕರ ದುರಂತವನ್ನೂ ಹೊತ್ತು ತಂದಿದ್ದಾನೆ. ನಗರದ ಶಿವಾಜಿನಗರದ ಬೌರಿಂಗ್ ಆಸ್ಪತ್ರೆ ಬಳಿ ಸಂಭವಿಸಿದ ಗೋಡೆ ಕುಸಿತದ ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 7 ಮಂದಿ ದುರ್ಮರಣಕ್ಕೀಡಾಗಿದ್ದಾರೆ.
ನಗರದಾದ್ಯಂತ ದಿಢೀರ್ ಆಲಿಕಲ್ಲು ಸಹಿತ ಭಾರೀ ಮಳೆ ಸುರಿದಿದೆ.
ಮಳೆಯ ಆರ್ಭಟಕ್ಕೆ ಬೌರಿಂಗ್ ಆಸ್ಪತ್ರೆಯ ಹಳೆಯ ಕಾಂಪೌಂಡ್ ಗೋಡೆ ಏಕಾಏಕಿ ಕುಸಿದು ಬಿದ್ದಿದೆ. ಗೋಡೆಯ ಪಕ್ಕದಲ್ಲೇ ಆಶ್ರಯ ಪಡೆದಿದ್ದ ಮತ್ತು ವ್ಯಾಪಾರ ಮಾಡುತ್ತಿದ್ದ ಸಾರ್ವಜನಿಕರ ಮೇಲೆ ಅವಶೇಷಗಳು ಬಿದ್ದಿದ್ದರಿಂದ ಈ ಸಾವು-ನೋವು ಸಂಭವಿಸಿದೆ. ಈ ಭೀಕರ ಅವಘಡಕ್ಕೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ನೇರ ಕಾರಣ ಎನ್ನಲಾಗುತ್ತಿದೆ. ಕುಸಿದು ಬಿದ್ದ ಕಾಂಪೌಂಡ್ ಗೋಡೆ ಸುಮಾರು 30 ವರ್ಷಗಳಷ್ಟು ಹಳೆಯದಾಗಿದ್ದು, ತೀವ್ರವಾಗಿ ಶಿಥಿಲಗೊಂಡಿತ್ತು.ಹಳೆಯ ಕಟ್ಟಡಗಳು ಮತ್ತು ಕುಸಿಯುವ ಹಂತದಲ್ಲಿರುವ ಗೋಡೆಗಳ ಬಗ್ಗೆ ಜಿಬಿಎ ಅಧಿಕಾರಿಗಳು ಗಮನಹರಿಸಬೇಕಿತ್ತು. ಆದರೆ, ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿರಲಿಲ್ಲ.
