ಉದಯವಾಹಿನಿ, ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮರು ಮತದಾನ ದಿನವೂ ಟಿಎಂಸಿ ಹಾಗೂ ಬಿಜೆಪಿ ಮಧ್ಯೆ ಜಟಾಪಟಿ ನಡೆದಿದೆ. ಭಾರಿ ಭದ್ರತೆ ನಡುವೆಯೂ ಡೈಮಂಡ್ ಹಾರ್ಬರ್ ವಿಧಾನಸಭಾ ಕ್ಷೇತ್ರದ ಫಾಲ್ಟಾ ಮತಗಟ್ಟೆಯಲ್ಲಿ ಸಂಘರ್ಷ ನಡೆದಿದೆ.
ದಕ್ಷಿಣ 24 ಪರಗಣದ ಎರಡು ವಿಧಾನಸಭಾ ಕ್ಷೇತ್ರಗಳಾದ ಮಗ್ರಹತ್ ಪಶ್ಚಿಮ್ ವಿಧಾನಸಭಾ ಕ್ಷೇತ್ರದ 11 ಮತಗಟ್ಟೆಗಳು ಮತ್ತು ಡೈಮಂಡ್ ಹಾರ್ಬರ್‌ನ ನಾಲ್ಕು ಮತಗಟ್ಟೆಗಳಲ್ಲಿ ಶನಿವಾರ ಬೆಳಗ್ಗೆ 7 ಗಂಟೆಗೆ ಸರಿಯಾಗಿ ಶಾಂತಿಯುತವಾಗಿ ಮರು ಮತದಾನ ಆರಂಭವಾಗಿತ್ತು. ಕೆಲವು ಹೊತ್ತಿನ ಬಳಿಕ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರು ಘರ್ಷಣೆ ನಡೆಸಿದ್ದಾರೆ. ಇದರಿಂದ ಎರಡೂ ಕಡೆಯವರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಗಳಿಗೆ ಮತದಾನಕ್ಕೆ ಅವಕಾಶ ನೀಡುತ್ತಿಲ್ಲ. ಟಿಎಂಸಿ ಭಯದ ವಾತಾವರಣ ನಿರ್ಮಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಟಿಎಂಸಿ ನಾಯಕ ಜಹಂಗೀರ್ ಖಾನ್ ಹಿಂದೂ ಮತದಾರರಿಗೆ ತಡೆಯೊಡ್ಡಿದ್ದಾರೆ. ಕೂಡಲೇ ಅವರನ್ನು ಬಂಧಿಸಬೇಕು ಎಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದರು. ಈ ವೇಳೆ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಘರ್ಷಣೆ ಉಂಟಾಯಿತು. ಕೇಂದ್ರ ಮೀಸಲು ಪಡೆ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ ಮಧ್ಯಾಹ್ನ 2 ಗಂಟೆಯ ವೇಳೆಗೆ ಮಗ್ರಹತ್ ಪಶ್ಚಿಮದಲ್ಲಿ ಶೇ.56.33ರಷ್ಟು ಮತ್ತು ಡೈಮಂಡ್ ಹಾರ್ಬರ್‌ನಲ್ಲಿ ಶೇ.54.9 ರಷ್ಟು ಮತದಾನವಾಗಿದೆ

Leave a Reply

Your email address will not be published. Required fields are marked *

error: Content is protected !!