ಉದಯವಾಹಿನಿ, ಡೆಹ್ರಾಡೂನ್‌, : ಇತ್ತೀಚೆಗೆ ಧಾರ್ಮಿಕ ನಂಬಿಕೆಯ ಹೆಸರಿನಲ್ಲಿ ಜನರು ನಾನಾ ರೀತಿಯ ಅನಾಚಾರ ಕೆಲಸ ಮಾಡುವ ಕೃತ್ಯ ಹೆಚ್ಚಾಗಿದೆ‌. ಇದಕ್ಕೆ ಸಾಕ್ಷಿ ಎಂಬಂತೆ ಮಹಿಳೆಯೊಬ್ಬರು ಸಾಕು ನಾಯಿಯನ್ನು ಗಂಗಾ ನದಿಯಲ್ಲಿ ಸ್ನಾನ ಮಾಡಿಸಿರುವ ಘಟನೆ ನಡೆದಿದೆ. ಈ ದೃಶ್ಯವು ಸ್ಥಳದಲ್ಲಿದ್ದ ಜನರ ಜತೆ ಬಿಸಿ ವಾಗ್ವಾದಕ್ಕೆ ಕಾರಣವಾಯಿತು‌. ಹಲವು ಭಕ್ತರು ಆಕೆಯ ಕೃತ್ಯವನ್ನು ಆಕ್ಷೇಪಿಸಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಈ ಘಟನೆಯೂ ಹರಿದ್ವಾರದ ಶ್ರದ್ಧಾನಂದ ಘಾಟ್‌ನಲ್ಲಿ ನಡೆದಿದೆ. ಅನೇಕ ಜನರು ನದಿಯಲ್ಲಿ ಧಾರ್ಮಿಕ ಸ್ನಾನಕ್ಕಾಗಿ ಅಲ್ಲಿ ನೆರೆದಿದ್ದರು. ಆದರೆ ಮಹಿಳೆ ತನ್ನ ಸಾಕು ನಾಯಿಯೊಂದಿಗೆ ನೀರಿನ ಬಳಿ ಸ್ನಾನ ಮಾಡಿಸಲು ಕರೆ ತಂದಿದ್ದಾಳೆ. ಸುತ್ತಮುತ್ತಲಿನ ಜನರು ಅವಳು ಏನು ಮಾಡುತ್ತಿದ್ದಾಳೆ ಎಂದು ಅಲ್ಲೇ ಕಿಡಿ ಕಾರಿದ್ದಾರೆ. ಸ್ಥಳದಲ್ಲಿದ್ದ ಕೆಲವು ಭಕ್ತರು ನಾಯಿಯನ್ನು ಬೇರೆಡೆಗೆ ಕರೆದೊಯ್ಯಲು ಸೂಚಿಸಿದ್ದಾರೆ.
ಸುತ್ತಲೂ ಹೆಚ್ಚಿನ ಜನರು ಸೇರುತ್ತಿದ್ದಂತೆ ಮಹಿಳೆ ವಾಗ್ವಾದಕ್ಕೆ ಇಳಿದಿದ್ದಾಳೆ. ಮಹಿಳೆ ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತ, ʼʼನಿಮಗೆ ಸಮಸ್ಯೆಯೇನು? ನಾಯಿ ಕೂಡ ದೇವರೇʼʼ ಎಂದು ವಾದ ಮಾಡಿದ್ದಾಳೆ. ಆಕೆ ನಿಂದನೀಯ ಭಾಷೆಯನ್ನು ಬಳಸಿದ್ದಾಳೆಂದು ಕೂಡ ಕೆಲವರು ಹೇಳಿಕೊಂಡಿದ್ದಾರೆ. ಘರ್ಷನೆ ಜೋರಾದಾಗ ಮಹಿಳೆ ತಾನು ಯಾವುದೇ ಸಚಿವಾಲಯಕ್ಕೆ ಸಂಬಂಧ ಹೊಂದಿರುವುದಾಗಿ ಹೇಳಿಕೊಂಡಿದ್ದಾಳೆ. ಅಲ್ಲಿ ನೆರೆದಿದ್ದ ಅನೇಕ ಭಕ್ತರು ಈ ಕೃತ್ಯವು ಅನುಚಿತ ಎಂದಿದ್ದಾರೆ. ಹಲವರು ಈ ನದಿಯ ನೀರನ್ನು ಪವಿತ್ರವೆಂದು ಪರಿಗಣಿಸುತ್ತಾರೆ.‌‌ ಧಾರ್ಮಿಕ ಸ್ನಾನಕ್ಕಾಗಿ ಹೆಚ್ಚಿನ ಸಂಖ್ಯೆಯ ಭಕ್ತರು ಬರುವ ಸ್ಥಳಗಳಿಗೆ ಸಾಕು ಪ್ರಾಣಿಗಳನ್ನು ಯಾಕೆ ಕರೆ ತರಬೇಕು ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು, ʼʼಜನರು ಸ್ನಾನ ಮಾಡುವ ನದಿಗಳಿಗೆ ಪ್ರಾಣಿಗಳನ್ನು ತರುವುದು ತಪ್ಪುʼʼ ಎಂದಿದ್ದಾರೆ. ಮತ್ತೊಬ್ಬರು, ʼʼನಾವು ದೇವಾಲಯಗಳಲ್ಲಿ ನಂದಿ ಮಹಾರಾಜನನ್ನು ಪೂಜಿಸುತ್ತೇವೆ. ಆದರೆ ನಿಜವಾದ ಪ್ರಾಣಿ ಬಂದಾಗ ನಾವು ಅದನ್ನು ಓಡಿಸುತ್ತೇವೆʼʼ ಎಂದು ಮಹಿಳೆಯ ಪರ ಮಾತನಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!