ಉದಯವಾಹಿನಿ, ತಿರುವನಂತಪುರಂ: ಕೊಟ್ಟರೆ ಮುಖ್ಯಮಂತ್ರಿ ಸ್ಥಾನ ಕೊಡಿ, ಇಲ್ಲದಿದ್ರೆ ಶಾಸಕನಾಗಿಯೇ ಇರುತ್ತೇನೆ. ಸಚಿವ ಸ್ಥಾನ ಮಾತ್ರ ಬೇಡ ಎಂದು ಕಾಂಗ್ರೆಸ್ ಹಿರಿಯ ನಾಯಕ ವಿ.ಡಿ. ಸತೀಸನ್ ಪಟ್ಟು ಹಿಡಿದಿದ್ದಾರೆ.
ಈಗಾಗಲೇ ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಪ್ರಮುಖ ನಾಯಕರ ನಡುವೆ ಜಟಾಪಟಿ ನಡೆಯುತ್ತಿದೆ. ಕೇರಳದಲ್ಲೂ ಈಗ ಕುರ್ಚಿಗಾಗಿ ಫೈಟ್ ಶುರುವಾಗಿದೆ. ಹಿರಿಯ ʻಕೈʼ ನಾಯಕ ವಿ.ಡಿ ಸತೀಸನ್ ಸಿಎಂ ಸ್ಥಾನಕ್ಕೆ ಬಿಗಿಪಟ್ಟು ಹಿಡಿದ್ದಾರೆ. ಪಿಣರಾಯಿ ವಿಜಯನ್ ಅವರ 10 ವರ್ಷದ ಆಡಳಿತ ಅಂತ್ಯಗೊಳಿಸಿ ಯುಡಿಎಫ್ (UDF) ಅಧಿಕಾರಕ್ಕೆ ಬಂದ ಆರಂಭದಲ್ಲೇ ಈ ಕಿತ್ತಾಟ ಶುರುವಾಗಿದೆ.
ಸಿಎಂ ಹುದ್ದೆ ಹೊರತುಪಡಿಸಿ ಬೇರೆ ಯಾವುದೇ ಹುದ್ದೆ ನನಗೆ ಬೇಡ. ಯಾವುದೇ ಷರತ್ತಿಗೂ ಮಣಿಯಲ್ಲ, ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸದಿದ್ದರೆ ಸಂಪುಟದ ಭಾಗವಾಗಿರೋದಿಲ್ಲ ಎಂದು ಹೈಕಮಾಂಡ್ ವೀಕ್ಷಕರಾದ ಅಜಯ್ ಮಾಕನ್ ಮತ್ತು ಮುಕುಲ್ ವಾಸ್ನಿಕ್ ಅವರಿಗೆ ತಿಳಿಸಿದ್ದಾರೆ. ಹೈಕಮಾಂಡ್ ಮೊದಲೇ ತೀರ್ಮಾನಿಸಿದಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರಿಗೆ ಸಿಎಂ ಹುದ್ದೆ ನೀಡಿ, ಸತೀಸನ್ ಅವರಿಗೆ ಪ್ರಮುಖ ಖಾತೆಗಳನ್ನ ನೀಡಿ ಮನವೊಲಿಸಲು ಮುಂದಾಗಿತ್ತು. ಆದ್ರೆ ರಾಜಿ ಸೂತ್ರವನ್ನ ಸತೀಸನ್ ತಿರಸ್ಕರಿಸಿದ್ದಾರೆ. ಯಾವುದೇ ಹೊಂದಾಣಿಕೆಗೂ ನಾನು ಒಪ್ಪಲ್ಲ ಎಂದಿದ್ದಾರೆ.
