ಉದಯವಾಹಿನಿ, ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಕೆಳಗೂರು ಎಸ್ಟೇಟ್ ಬಳಿ ಕಾಫಿ ತೋಟದಲ್ಲಿ ನಾಪತ್ತೆಯಾಗಿದ್ದ ಒಂದೂವರೆ ವರ್ಷದ ಮಗುವನ್ನು ಪೊಲೀಸರು 12 ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿದ್ದಾರೆ. ಒಂದೂವರೆ ವರ್ಷದ ಶಿವಂ ಮಳೆ ಮಧ್ಯೆ 12 ಗಂಟೆಗಳ ಕಾಲ ಹಳ್ಳದಲ್ಲಿ ಕೂತು ಬಚಾವ್ ಆದ ಮಗು. ಕಳೆದ ವಾರ ಮಧ್ಯಪ್ರದೇಶದಿಂದ ಕೆಲಸಕ್ಕೆಂದು ಬಂದಿದ್ದ ಕುಟುಂಬ, ಮಗುವನ್ನ ನೋಡಿಕೊಳ್ಳಲು ಮಹಿಳೆಯೊಬ್ಬರ ಜೊತೆಗೆ ಬಿಟ್ಟು ಹೋಗಿದ್ದರು. ಕೂಲಿ ಕಾರ್ಮಿಕರ ಐದು ಮಕ್ಕಳನ್ನು ಆ ಮಹಿಳೆ ನೋಡಿಕೊಳ್ಳುತ್ತಿದ್ದರು. ಈ ವೇಳೆ ಮಗು ಅಳುತ್ತಿದೆ ಎಂಬ ಕಾರಣಕ್ಕೆ ಎಂಟು ವರ್ಷದ ಬಾಲಕಿಯ ಜೊತೆ ನಾಲ್ಕು ಮಕ್ಕಳನ್ನು ಮಹಿಳೆ, ಮನೆಗೆ ಕಳಿಸಿಕೊಟ್ಟಿದ್ದರು. ದಾರಿಯಲ್ಲಿ ಬರುವಾಗ ಮಗು ಶಿವಂ ಹಿಂದೆ ಉಳಿದು ದಾರಿ ತಪ್ಪಿದ್ದ.
ಸಂಜೆ ಪೋಷಕರು ಮನೆಗೆ ಬಂದಾಗ ಮಗು ನಾಪತ್ತೆಯಾದ ವಿಷಯ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರು, ಡಾಗ್ ಸ್ಕ್ವಾಡ್ ಹಾಗೂ ಸ್ಥಳೀಯರು ಹುಡುಕಾಟ ಆರಂಭಿಸಿದ್ದರು. ರಾತ್ರಿಯಿಡೀ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ 12 ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಲಾಗಿದೆ. ಇಂದು ಬೆಳಿಗ್ಗೆ ಮನೆಯಿಂದ ಸುಮಾರು 500 ಮೀಟರ್ ದೂರದ ಹಳ್ಳವೊಂದರಲ್ಲಿ ಮಗು ಪತ್ತೆಯಾಗಿದೆ.
