ಉದಯವಾಹಿನಿ, ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ದುಡ್ಡು ಕೊಟ್ಟು ಮ್ಯಾಚ್ ನೋಡ್ತಾರಾ? ಅಥವಾ ಪುಗ್ಸಟ್ಟೆ ನೋಡ್ತಾರಾ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ನಗರದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ ಟಿಕೆಟ್ಗಾಗಿ ಒತ್ತಡದಿಂದ ಐಪಿಎಲ್ ಪೈನಲ್ ಮ್ಯಾಚ್ ಸ್ಥಳಾಂತರಗೊಂಡಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದರು. ಐಪಿಎಲ್ ಟಿಕೆಟ್ ಶಾಸಕರು ಕೇಳಿದ್ದಾರೆ. ಎಂಪಿಗಳು ಕೇಳಿದ್ದಾರೆ ಅಂತ ಏನಿಲ್ಲ. ಮೊದಲು ಸದನದಲ್ಲಿ ವಿಪಕ್ಷ ನಾಯಕ ಅಶೋಕ್ ಪ್ರಸ್ತಾಪ ಮಾಡಿದ್ರು. ಬಳಿಕ ಎಲ್ಲರೂ ಅದಕ್ಕೆ ಧ್ವನಿಗೂಡಿಸಿದ್ದರು ಎಂದು ಸ್ಪಷ್ಟಪಡಿಸಿದರು.
ಟಿಕೆಟ್ ಕೊಡುವುದು ತಪ್ಪು ಅಂತ ಕೆಲವರು ಹೇಳಿದ್ದಾರೆ. ಈಗಾಗಲೇ ಐದಾರು ಮ್ಯಾಚ್ ನಡೆದಿದೆ. ಅದೆಲ್ಲ ಹೇಗೆ ನಡೆಯಿತು? ಈಗ ಲಾಭಕ್ಕಾಗಿ ಗುಜರಾತ್ಗೆ ಶಿಫ್ಟ್ ಮಾಡಿದ್ದಾರೆ. ಸದನದಲ್ಲಿ ಬಿಜೆಪಿ ವಿಪಕ್ಷ ನಾಯಕರೇ ಐಪಿಎಲ್ ಟಿಕೆಟ್ ಕೇಳಿದ್ದರು. ಹಾಗಾದರೆ ಮ್ಯಾಚ್ ಹೋಗಲು ಬಿಜೆಪಿನೇ ಕಾರಣನಾ? ಸುಮ್ಮನೆ ಎನೇನೋ ಹೇಳೋದಲ್ಲ. ಹೆಚ್ಚು ಲಾಭ ಬೇಕಿದೆ. ಅದಕ್ಕೆ ತೆಗೆದುಕೊಂಡು ಹೋಗಿದ್ದಾರೆ. ರಾಜ್ಯಕ್ಕೆ ಬಂಡವಾಳದಲ್ಲಿ ಅನ್ಯಾಯ ಮಾಡುವ ಹಾಗೇ ಇಲ್ಲೂ ಅನ್ಯಾಯ ಮಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು. ಭದ್ರತೆ ವಿಷಯದಲ್ಲಿ ಶಾಸಕರು, ಸಂಸದರದ್ದು ಯಾವ ಸಮಸ್ಯೆಯೂ ಇಲ್ಲ. ಯಾರು ಮೇಲ್ ಮಾಡಿದ್ದಾರೋ ಗೊತ್ತಿಲ್ಲ. ಬಾಂಬೆಯಲ್ಲಿ ಮಾಡಬಹುದಿತ್ತು. ಗುಜರಾತ್ಗೆ ಯಾಕೆ ಶಿಫ್ಟ್ ಮಾಡಿದ್ರು?ಇರೋ ಬರೋ ಮ್ಯಾಚ್ ಎಲ್ಲಾ ಗುಜರಾತ್ಗೆ ಯಾಕೆ ಶಿಪ್ಟ್ ಮಾಡ್ತಿರೋದು? ಇದನ್ನು ಬಹಳ ಸ್ಪಷ್ಟವಾಗಿ ಸಿಎಂ, ಡಿಸಿಎಂ ಎಲ್ಲ ಖಂಡಿಸಿದ್ದಾರೆ. ಗೌರವಯುತವಾಗಿ ಟಿಕೆಟ್ ಕೊಟ್ಟರೆ ಅಡ್ಡಿಯಿಲ್ಲ. ಯಾವ ಶಾಸಕರು ಅಷ್ಟು ಬೇಕು ಇಷ್ಟು ಬೇಕು ಎಂದು ಕೇಳಿಲ್ಲ ಎಂದರು.ತಮಿಳುನಾಡಿನಲ್ಲಿ ರಾಜ್ಯಪಾಲರು ಬೆಂಬಲ ಪತ್ರ ಕೇಳಿರುವ ವಿಚಾರವಾಗಿ, ಅಲ್ಲಿ ಸಂಪೂರ್ಣ ಬಹುಮತ ಸಿಕ್ಕಿಲ್ಲ. ಕೇರಳದಲ್ಲಿ ಬಹುಮತ ಸಿಕ್ಕಿದೆ ಇಂದು ಎಲ್ಲಾ ಕುಳಿತು ತೀರ್ಮಾನ ನಡೆಸಿ ಹೈಕಮಾಂಡ್ಗೆ ತಿಳಿಸ್ತಾರೆ. ಖರ್ಗೆ ಸಾಹೇಬ್ರು, ರಾಹುಲ್ ಗಾಂಧಿಯವರು ಕುಳಿತು ಘೋಷಣೆ ಮಾಡ್ತಾರೆ. ಎಲ್ಲರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರೋದಾಗಿ ಹೇಳಿದ್ದಾರೆ.
