ಉದಯವಾಹಿನಿ, ಬೆಂಗಳೂರು: ಎತ್ತಿನಹೊಳೆ ಯೋಜನೆ ಕಾಮಗಾರಿ ನಡೆಯುತ್ತಿರುವ ಅರಣ್ಯ ಪ್ರದೇಶ ಐದಳ್ಳ ಕಾವಲು , ರಾಮದೇವರಹಳ್ಳ ಕಾವಲು ಪ್ರದೇಶಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೇಲೂರು ಪ್ರವಾಸದಿಂದ ಬೆಂಗಳೂರಿಗೆ ಮರಳುವ ಮಾರ್ಗದಲ್ಲಿ ಈ ಪ್ರದೇಶಕ್ಕೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದ ಸಚಿವರು, ಈ ಪ್ರದೇಶದಲ್ಲಿರುವ ಶ್ರೀಗಂಧ, ತೇಗ, ಬೀಟೆ ಸೇರಿದಂತೆ ಬೆಲೆಬಾಳುವ ಮರಗಳಿಗೆ ಜಿಯೋ ಟ್ಯಾಗ್ ಮಾಡಿ ಸಂರಕ್ಷಿಸುವಂತೆ ಮತ್ತು ಗಸ್ತು ನಿಯೋಜಿಸುವಂತೆ ಸೂಚಿಸಿದರು. ಈ ಪ್ರದೇಶದಲ್ಲಿ ಸುಮಾರು 9 ಸಾವಿರಕ್ಕೂ ಹೆಚ್ಚು ಎಕರೆ ಅರಣ್ಯ ಪ್ರದೇಶವಿದ್ದು, ಕೆಲವು ಕಡೆ ಅಕ್ರಮ ಮಂಜೂರಾತಿ ಆಗಿದೆ. ಪ್ರಸ್ತುತ ಖಾಲಿ ಇರುವ ಅರಣ್ಯ ಭೂಮಿಯನ್ನು ವಶಕ್ಕೆ ಪಡೆದು ಸಂರಕ್ಷಿಸಲು ಮತ್ತು ಅಕ್ರಮ ಒತ್ತುವರಿ ತೆರವಿಗೆ ಮತ್ತು ಅಕ್ರಮ ಮಂಜೂರಾತಿಯ ರದ್ಧತಿಗೆ ಕಾನೂನು ರೀತಿಯ ಕ್ರಮ ವಹಿಸಲು ಸೂಚಿಸಿದರು. ಈ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!