ಉದಯವಾಹಿನಿ, ಬೆಂಗಳೂರು: ನಗರದ ಹೊರವಲಯದ ತಾತಗುಣಿ ಬಳಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿರುವುದು ಈಗ ತನಿಖಾ ತಂಡಗಳಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಘಟನೆಯು ಕೇವಲ ಕಾಕತಾಳೀಯವೇ ಅಥವಾ ಇದರ ಹಿಂದೆ ಯಾವುದಾದರೂ ಉದ್ದೇಶಪೂರ್ವಕ ಸಂಚು ಅಡಗಿದೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ಎರಡು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಬೆದರಿಕೆ ಕರೆ ಮಾಡಿದ್ದ ಹಿನ್ನೆಲೆಯಲ್ಲಿ ಪೊಲೀಸರ ವಶದಲ್ಲಿರುವ ಲೋಹಿತ್ ಎಂಬಾತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಆತನ ಟ್ರಾವೆಲ್ ಹಿಸ್ಟರಿ ಪರಿಶೀಲಿಸಿದಾಗ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಭೇಟಿ ನೀಡುವ ಕೇವಲ ಒಂದು ದಿನದ (ಮೇ 9) ಮೊದಲು ಲೋಹಿತ್ ತಮಿಳುನಾಡಿಗೆ ಹೋಗಿ ಬಂದಿರುವುದು ಪತ್ತೆಯಾಗಿದೆ.

ತಮಿಳುನಾಡಿನಲ್ಲಿ ಜಿಲೆಟಿನ್ ತಯಾರಿಕಾ ಘಟಕಗಳು ಮತ್ತು ಮಾರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಆತ ಅಲ್ಲಿಗೆ ಭೇಟಿ ನೀಡಿದ್ದು ಯಾಕೆ? ಸ್ಫೋಟಕಗಳನ್ನು ತರಲು ಹೋಗಿದ್ದನೇ? ಎಂಬ ಅನುಮಾನ ಪೊಲೀಸರನ್ನು ಕಾಡುತ್ತಿದೆ. ಪ್ರಸ್ತುತ ತಮಿಳುನಾಡಿನ ಸ್ಫೋಟಕ ಮಾರಾಟಗಾರರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ತಾತಗುಣಿಯಲ್ಲಿ ಸಿಕ್ಕಿರುವ ಕಡ್ಡಿಗಳು ಸುಮಾರು ಎರಡು ವರ್ಷಕ್ಕಿಂತಲೂ ಹಳೆಯವು. ಸಾಮಾನ್ಯವಾಗಿ ಎರಡು ವರ್ಷ ಕಳೆದ ಜಿಲೆಟಿನ್ ಕಡ್ಡಿಗಳು ಶಕ್ತಿ ಕಳೆದುಕೊಳ್ಳುತ್ತವೆ. ಒಂದು ವೇಳೆ ಇವುಗಳನ್ನು ಸ್ಫೋಟಿಸಿದರೂ ನಿಗದಿತ ಪ್ರಮಾಣದ ಹಾನಿ ಉಂಟುಮಾಡುವ ಸಾಮರ್ಥ್ಯ ಹೊಂದಿರುವುದಿಲ್ಲ. ಹಾಗಾಗಿ ಸ್ಥಳೀಯ ಕಲ್ಲಿನ ಕ್ವಾರಿಗಳಲ್ಲಿ ಕೆಲಸ ಮಾಡುವವರು ಬಳಕೆಗೆ ಬಾರದ ಹಳೆಯ ಕಡ್ಡಿಗಳನ್ನು ಇಲ್ಲಿಗೆ ತಂದು ಬಿಸಾಡಿರಬಹುದು ಎನ್ನುವ ಕೋನದಲ್ಲೂ ತನಿಖೆ ನಡೆಯುತ್ತಿದೆ.

 

 

Leave a Reply

Your email address will not be published. Required fields are marked *

error: Content is protected !!