ಉದಯವಾಹಿನಿ, ಮೈಸೂರು: ಸಿದ್ದರಾಮಯ್ಯ ಅವರು ಸದನದ ಒಳಗಡೆ ಜೆಡಿಎಸ್ 17 ಸ್ಥಾನಗಳಿಂದ ಸಿಂಗಲ್ ಡಿಜಿಟ್‌ಗೆ ಬರುತ್ತೆ ಎಂದು ಅಪಹಾಸ್ಯ ಮಾಡಿದ್ದಾರೆ. ವರುಣ ಕ್ಷೇತ್ರದಲ್ಲೇ ಈ ಸವಾಲನ್ನು ಸ್ವೀಕರಿಸುತ್ತೇನೆ” ಎಂದು JDS ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೇರ ಸವಾಲು ಹಾಕಿದರು. ವರುಣ ಕ್ಷೇತ್ರದ ಮೆಲ್ಲಹಳ್ಳಿಯಲ್ಲಿ ಬುಧವಾರ ನಡೆದ ಜನರೊಂದಿಗೆ ಜನತಾದಳ ಸಮಾರಂಭದಲ್ಲಿ ಮಾತನಾಡಿದ ಅವರು, 2004ರಲ್ಲಿ JDS 58 ಸ್ಥಾನ ಪಡೆದಿತ್ತು. ಅದಕ್ಕಿಂತ ಒಂದು ಸ್ಥಾನ ಹೆಚ್ಚಾಗಿ ಪಡೆದು, 2028ಕ್ಕೆ ಎನ್​ಡಿಎ(NDA) ಸರ್ಕಾರ ರಚನೆ ಮಾಡುತ್ತೇವೆ ತಿರುಗೇಟು ನೀಡಿದರು.

ಅಹಿಂದ ನಾಯಕತ್ವಕ್ಕೆ ಪ್ರಶ್ನೆ: “ಅಹಿಂದ ನಾಯಕ ಅಂತ ಹೇಳುವವರು, ನಿಮ್ಮನ್ನು ಚಾಂಪಿಯನ್ ಮಾಡಿದ್ದು ಯಾರು ಅನ್ನೋದನ್ನು ಮರೆತಿದ್ದೀರಾ?” ಎಂದು ಪ್ರಶ್ನಿಸಿದ ನಿಖಿಲ್, “ಇಂದು ದಾಖಲೆ ಬಜೆಟ್ ಮಂಡಿಸಿದ್ದೇನೆ ಎಂದು ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು. “ಸಮಾಜವಾದಿ ಅಂತ ಗುರುತಿಸಿಕೊಳ್ಳುವುದಕ್ಕೆ ಪಕ್ಷ ಯಾವುದು? ನಾಯಕರು ಯಾರು?” ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ ಅವರು, “ನಮ್ಮ ಪಕ್ಷದಿಂದ ರಾಜಕೀಯವಾಗಿ ಬೆಳೆದು, ಉಂಡು ತಿಂದು ಬೆಳೆದವರು ಮನೆಗೆ ದ್ರೋಹ ಮಾಡಿದ್ದಾರೆ. ಸದನದ ಒಳಗೆ ಜೆಡಿಎಸ್​ 17 ಸ್ಥಾನಗಳಿಂದ ಸಿಂಗಲ್ ಡಿಜಿಟ್‌ಗೆ ಬರುತ್ತೆ ಎಂದು ಅಪಹಾಸ್ಯ ಮಾಡಿದರು” ಎಂದು ಆರೋಪಿಸಿದರು.
ದಲಿತರ ಹಣ ಗ್ಯಾರಂಟಿಗೆ ವರ್ಗಾವಣೆ: “ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಕುರ್ಚಿ ಕದನ ಮತ್ತು ಸುಳ್ಳು ಪ್ರಚಾರದಿಂದ ರಾಜ್ಯದ ವ್ಯವಸ್ಥೆ ಮೂರಾಬಟ್ಟೆಯಾಗಿದೆ. ಕಳೆದ 3 ವರ್ಷಗಳಲ್ಲಿ SCP/TSP ಅಡಿ ದಲಿತ ಅಭಿವೃದ್ಧಿಗೆ ನಿಗದಿಯಾಗಿದ್ದ ₹29,764.10 ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲಾಗಿದೆ. ಅನುದಾನವನ್ನು ₹190 ಕೋಟಿಯಿಂದ ₹50 ಕೋಟಿಗೆ ಇಳಿಸಿ, ₹140 ಕೋಟಿ ಕಡಿತ ಮಾಡಿರುವುದು ದಲಿತರಿಗೆ ಮಾಡಿದ ದ್ರೋಹ” ಎಂದು ನಿಖಿಲ್ ಕಿಡಿಕಾರಿದರು. ಕಳೆದ ಎರಡು ದಶಕಗಳಲ್ಲಿ 54 ಜನರು ಜೆಡಿಎಸ್​ (JDS) ಪಕ್ಷದಿಂದ ಶಾಸಕರಾಗಿ ಅಧಿಕಾರ ಅನುಭವಿಸಿ, ರಾಜಕೀಯ ಲಾಭಕ್ಕಾಗಿ ಪಕ್ಷ ಬಿಟ್ಟು ಹೋದರು. ಅಷ್ಟು ಜನ ಬಿಟ್ಟರೂ ಪಕ್ಷ ಇಷ್ಟು ಸದೃಢವಾಗಿದೆ ಎಂದರೆ, ಅದು ನಿಮ್ಮಂಥ ನಿಷ್ಠಾವಂತ ಕಾರ್ಯಕರ್ತರಿಂದ” ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.ರೈತರು, ಸಾಲದ ಅಂಕಿ-ಅಂಶ: “ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ 2,416 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಮಾತ್ರ ಕಳೆದ 2 ವರ್ಷಗಳಲ್ಲಿ 138 ರೈತರು ಬಲಿಯಾಗಿದ್ದಾರೆ. 2026ರ ಅಂತ್ಯಕ್ಕೆ ರಾಜ್ಯದ ಒಟ್ಟು ಸಾಲ ₹7.64 ಲಕ್ಷ ಕೋಟಿ ಮೀರಲಿದೆ” ಎಂದು ಅಂಕಿ-ಅಂಶ ಸಮೇತ ನಿಖಿಲ್​ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

“ಕುಮಾರಣ್ಣ ಅಧಿಕಾರದಲ್ಲಿದ್ದಾಗ ₹25,000 ಕೋಟಿ ಸಾಲ ಮನ್ನಾ ಮಾಡಿ 25 ಲಕ್ಷ ರೈತ ಕುಟುಂಬಗಳಿಗೆ ನೆರವಾದರು. ನಾವು ಜನರ ಪರವಾಗಿ ಹೋರಾಟ ಮುಂದುವರಿಸುತ್ತೇವೆ. 2028ಕ್ಕೆ ಕರ್ನಾಟಕದಲ್ಲಿ ಜನಪರ ಎನ್​ಡಿಎ ಸರ್ಕಾರ ಬರುವುದು ಖಚಿತ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!