ಉದಯವಾಹಿನಿ ಯಾದಗಿರಿ : ಜಿಲ್ಲೆಯಲ್ಲಿ ಯಾವುದೇ ಮಗು ಮತ್ತು ಗರ್ಭಿಣಿಯರು ಲಸಿಕೆಯಿಂದ ವಂಚಿತರಾಗಬಾರದು. ನಿಗದಿತ ಅವಧಿಯಲ್ಲಿ ವಯಸ್ಸಿಗೆ ಅನುಗುಣವಾಗಿ ಮಕ್ಕಳಿಗೆ ಲಸಿಕೆ  ಹಾಕಿಸಿ ಸಾರ್ವಜನಿಕರು ಇಂದ್ರಧನುಷ್ ಲಸಿಕಾ ಅಭಿಯಾನ ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ಕೋರಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ  ಸಹಯೋಗದಲ್ಲಿ   ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಆರೋಗ್ಯ ಇಲಾಖೆಯ ಇಂದ್ರಧನುಷ್ ಲಸಿಕಾ ಅಭಿಯಾನದ ಕುರಿತು ಜಿಲ್ಲಾ ಮಟ್ಟದ ಪೂರ್ವಭಾವಿ  ಸಭೆ ನಡೆಸಿ ಹಾಗೂ ಅಭಿಯಾನದ ಜಾಗೃತಿಯ ಭಿತ್ತಿಪತ್ರಗಳನ್ನು  ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಲಸಿಕೆ ವಂಚಿತರಿಗೆ ಲಸಿಕೆ ನೀಡುವ ಮಹಾ ಅಭಿಯಾನವು  ತಾಯಿ ಮತ್ತು ಮಗುವಿನ ಗಂಭೀರ ಕಾಯಿಲೆಗಳ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿ ಮತ್ತು ರಕ್ಷಣೆ ನೀಡುವ ಸಲುವಾಗಿ ಸರ್ಕಾರವು ಈ  ಅಭಿಯಾನ ನಡೆಸುತ್ತಿದೆ ಎಂದರು.ಇಂದ್ರಧನುಷ್ ಯೋಜನೆಯಡಿ ಐದು ವರ್ಷದೊಳಗಿನ ಮಕ್ಕಳಿಗೆ ಬರುವ ಏಳು ಕಾಯಿಲೆಗಳಿಗೆ ಲಸಿಕೆ ನೀಡಲಾಗುತ್ತಿದ್ದು, ಮಕ್ಕಳಲ್ಲಿ ಕಾಣಿಸುವ ಅಪಾಯಕಾರಿ ಏಳು ರೋಗಗಳು ಏಳು ಬಣ್ಣಗಳನ್ನು ಪ್ರತಿನಿಧಿಸುವುದರಿಂದ ಕಾಮನಬಿಲ್ಲನ್ನು ಇಂದ್ರಧನುಷ್ ಚಿಹ್ನೆಯಾಗಿ ಇಡಲಾಗಿದೆ.ಒಣ ಕೆಮ್ಮು, ದಡಾರ, ಪೋಲಿಯೋ, ಡಿಫ್ತೀರಿಯಾ, ಹೆಪಟೆಟಿಸ್ ಬಿ, ಧನುರ್ವಾಯು ಮತ್ತು ಕ್ಷಯ ರೋಗದಿಂದ ಮಕ್ಕಳನ್ನು ರಕ್ಷಿಸುವುದು ಅಭಿಯಾನದ ಉದ್ದೇಶವಾಗಿದೆ. ಕ್ಷಯ, ಡಿಫ್ತೀರಿಯಾ, ಪೆರ್ಟುಸಿಸ್‌, ಟೆಟನಸ್, ಪೋಲಿಯೋ, ನ್ಯುಮೋನಿಯಾ ಸೇರಿದಂತೆ ಇನ್ನಿತರ ಅಪಾಯಕಾರಿ ರೋಗಳ ವಿರುದ್ಧ ಲಸಿಕೆ ಕಾರ್ಯ ನಿರ್ವಹಿಸಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

*ಮೂರು ಸುತ್ತಿನಲ್ಲಿ ಕಾರ್ಯಕ್ರಮ*; 
ಲಸಿಕೆ ವಂಚಿತರಿಗೆ ಮೂರು ಸುತ್ತಿನಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ನಡೆಯಲಿದ್ದು, ತಲಾ ಆರು ದಿನಗಳ ಕಾಲ ಲಸಿಕೆ ನೀಡಲಾಗುತ್ತದೆ. ಮೊದಲನೇ ಸುತ್ತು ಆಗಸ್ಟ್ 7ರಿಂದ 12 ವರೆಗೆ ನಡೆಯಲಿದೆ. ಎರಡನೇ ಸುತ್ತಿನಲ್ಲಿ ಸೆಪ್ಟೆಂಬರ್ 11ರಿಂದ 16ರ ವರೆಗೆ ಲಸಿಕೆ ಹಾಕಲಾಗುವುದು. ಮೂರನೇ ಸುತ್ತು ಅಕ್ಟೋಬರ್ 9ರಿಂದ 14 ರವರೆಗೆ ಲಸಿಕಾ ಅಭಿಯಾನ ನಡೆಸಲಾಗುವುದು ಎಂದರು.
ಜಿಲ್ಲೆಯಲ್ಲಿ ಮೂರು ಹಂತದಲ್ಲಿ ಲಸಿಕೆ ನೀಡಲಾಗುತ್ತಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯತಿ,  ನಗರಪಾಲಿಕೆ ಇನ್ನಿತರ ಇಲಾಖೆಯವರು ಸಮನ್ವಯ ಸಾಧಿಸಿ ಮನೆ-ಮನೆ ಸರ್ವೆ ಕಾರ್ಯ ನಡೆಸಿ ಯಾರು ಲಸಿಕೆಯಿಂದ ವಂಚಿತರಾಗಿದ್ದಾರೆ ಎನ್ನುವ ಮಾಹಿತಿ ಕಲೆ ಹಾಕಬೇಕು ಎಂದು ಜಿಲ್ಲಾಧಿಕಾರಿ  ಸೂಚಿಸಿದರು.
ಜಿಲ್ಲೆಯಲ್ಲಿ ಲಸಿಕೆಯಿಂದ ಹೊರಗುಳಿದ ಒಟ್ಟು  ಗರ್ಭಿಣಿಯರು  1541 ,  ಎರಡು ವರ್ಷ ವಯಸ್ಸಿನ ಒಳಗಿನ ಮಕ್ಕಳು 8884, ಎರಡು ವರ್ಷದ ನಂತರ ಮತ್ತು ಐದು ವರ್ಷ ಒಳಗಿನ   2240 ಮಕ್ಕಳು  ಇದ್ದಾರೆ.
ಇವರನ್ನು ಗುರುತಿಸಿ ಲಸಿಕೆ ನೀಡಲು 922 ನಿಗದಿತ ಸ್ಥಳಗಳಲ್ಲಿ ಸಿದ್ದತೆ ಮಾಡಿಕೊಂಡಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಲಸಿಕೆ ಪಡೆಯದೆ ಬಿಟ್ಟು ಹೋದ ಐದು ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿಯರಿಗೆ ಇಂದ್ರ ಧನುಷ್ ಅಭಿಯಾನದಲ್ಲಿ ನಿಗದಿತ ಲಸಿಕಾ ಕೇಂದ್ರಗಳಲ್ಲಿ  ಸಾರ್ವತ್ರಿಕ ಲಸಿಕೆ ಕಾರ್ಯಕ್ರಮದಡಿ  ಲಸಿಕೆ ನೀಡಿ,  ಗಂಭೀರ ಕಾಯಿಲೆಗಳಾದ ಪೋಲಿಯೋ ಇನ್ನಿತರ ಕಾಯಿಲೆಗಳಿಂದ ರಕ್ಷಣೆ ಪಡೆಯಲು ಎರಡು ವರ್ಷದ ಮಕ್ಕಳು ಲಸಿಕೆ ಪಡೆಯುವುದು ಅತೀ ಮುಖ್ಯ. ಈ ರೋಗಗಳಿಂದ ಮರಣ ತಪ್ಪಿಸಲು ಎಲ್ಲ ಸಿದ್ಧತೆ, ಪರೀಕ್ಷೆಯೊಂದಿಗೆ ಈ ಲಸಿಕೆಯನ್ನು ನೀಡಲಾಗುತ್ತಿದೆ.ಡಿಸೆಂಬರ್ 2023 ರ ಒಳಗೆ ಕೇಂದ್ರಸರ್ಕಾರವು ರುಬೆಲ್ಲಾ ರೋಗವನ್ನು ಜಿಲ್ಲೆಯಿಂದ ನಿರ್ಮೂಲನೆ ಮಾಡುವ ಗುರಿ ಹೊಂದಿದ್ದು ಇದರ ಅಂಗವಾಗಿ ಪರಿಣಾಮಕಾರಿಯಾಗಿ  ಮಿಷನ್ ಇಂದ್ರಧನುಷ್ ಲಸಿಕಾ ಅಭಿಯಾನವು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.ಅಭಿಯಾನವನ್ನು ಅರ್ಹರಿಗೆ ಮುಟ್ಟಿಸುವ ಉದ್ದೇಶದಿಂದ ಮುಂಚೂಣಿಯ ಆರೋಗ್ಯ ಕಾರ್ಯಕರ್ತರು, ಆಶಾ ಅಂಗನವಾಡಿ ಕಾರ್ಯಕರ್ತರು, ಗ್ರಾಮ ಪಂಚಾಯತ, ನಗರ ಪಾಲಿಕೆ ಸಿಬ್ಬಂದಿಯವರು ಮನೆ-ಮನೆ ಸಮೀಕ್ಷೆ ಕಾಲದಲ್ಲಿ ಯಾವ ಮಕ್ಕಳು ಯಾವ ಲಸಿಕೆ ಎಷ್ಟು ಡೋಸ್ ಪಡೆದಿದ್ದಾರೆ, ಬಾಕಿ ಇರುವ ಲಸಿಕೆ ಯಾವುದು ಅಥವಾ ಒಂದೂ ಲಸಿಕೆ ಪಡೆಯದೆ ಇರುವ ಮಕ್ಕಳು ಎಷ್ಟು ಎನ್ನುವುದನ್ನು ಗುರುತಿಸಬೇಕು.ನಗರ ಪ್ರದೇಶ ಅಲ್ಲದೆ ಹೊರ ವಲಯಗಳು, ಕೊಳಗೇರಿ ಪ್ರದೇಶಗಳು, ಅಲ್ಲದೆ ದಡಾರ, ಗಂಟಲು ಮಾರಿ ಮತ್ತು ಧನುರ್ವಾಯು ಪ್ರಕರಣಗಳು ವರದಿಯಾದ ಪ್ರದೇಶಗಳು, ಹೆಚ್ಚು ಸಾಂಕ್ರಾಮಿಕ ರೋಗಗಳು ವರದಿಯಾಗುವ ಪ್ರದೇಶ, ಲಸಿಕೆಯನ್ನು ವಿರೋಧಿಸುವ ಪ್ರದೇಶಗಳಲ್ಲಿ ಈ ಅಭಿಯಾನವನ್ನು ಬಿರುಸಾಗಿ ನಡೆಸಬೇಕು ಎಂದು ಅವರು ಸೂಚಿಸಿದರು. ಇಂದ್ರಧನುಷ್ 5.0 ಕಾರ್ಯಕ್ರಮ ಯಶಸ್ವಿಗೊಳಿಸಲು  ಗ್ರಾಮ ಪಂಚಾಯತಿ ಅಧಿಕಾರಿಗಳು ಗ್ರಾಮಗಳಲ್ಲಿ ಡಂಗೂರ ಬಾರಿಸಿ ಜಾಗೃತಿ ಮೂಡಿಸಬೇಕು,  ನಗರ ಪ್ರದೇಶಗಳಲ್ಲಿ ಅಧಿಕಾರಿಗಳು ಭಿತ್ತಿಪತ್ರಗಳನ್ನು ಮುದ್ರಿಸಿ ಅರಿವು ಮೂಡಿಸಿ, ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಲಸಿಕಾಕರಣ ಕೈಗೊಳ್ಳಲು ಮೊಬೈಲ್ ಲಸಿಕಾ ವಾಹನ ಒದಗಿಸಲು ಕ್ರಮವಹಿಸಿ, ಶಿಕ್ಷಣ ಇಲಾಖೆಯವರು  ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ 5 ವರ್ಷದೊಳಗಿನ ಮಕ್ಕಳಿದ್ದಲ್ಲಿ ಲಸಿಕೆ ಪಡೆಯಲು ಪೋಷಕರನ್ನು ಪ್ರೇರೇಪಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಸುತ್ತೋಲೆ ಹೊರಡಿಸಿಬೇಕು. ಹೊಸದಾಗಿ ಮಕ್ಕಳನ್ನು ಶಾಲೆಗೆ ನೋಂದಣಿ ಮಾಡಿಕೊಳ್ಳುವ ಸಮಯದಲ್ಲಿ ಈ ಹಿಂದೆ ಪಡೆದಿರುವ ಲಸಿಕೆಗಳ ಪರಿಶೀಲನೆ ಮಾಡಬೇಕು. ಅಲ್ಪಸಂಖ್ಯಾತರ ಸಮುದಾಯದಗಳಲ್ಲಿ ಲಸಿಕಾಕರಣದ ಬಗ್ಗೆ ಜಾಗೃತಿ ಮೂಡಿಸಿ ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗರಿಮಾ ಪನ್ವಾರ್, ಪ್ರಭಾರಿ ಡಿಹೆಚ್ಓ ಡಾ. ಲಕ್ಷ್ಮೀಕಾಂತ ಒಂಟೀಪೀರ, ಆರ್ಸಿಹೆಚ್ಓ ಡಾ. ಮಲ್ಲಪ್ಪ,  ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ, ಜಿಲ್ಲಾ ಕ್ಷಯರೋಗ ನಿರ್ಮೂಲನೆ ಅಧಿಕಾರಿ ಡಾ.ಸಂಜೀವಕುಮಾರ ರಾಯಚೂರಕರ್, ಜಿಲ್ಲಾ ಸರ್ವೇಕ್ಷಣೆ ಅಧಿಕಾರಿ ಡಾ.ಸಾಜಿದ್ ಮುಬಾಶಿರ್,  ಯಾದಗಿರಿ ವೈದ್ಯಾಧಿಕಾರಿ ಡಾ.ಹಣಮಂತರೆಡ್ಡಿ, ಸುರಪುರ ವೈದ್ಯಾಧಿಕಾರಿ ಡಾ.ರಾಜಾ ವೆಂಕಟಪ್ಪ ನಾಯಕ, ಶಹಾಪುರ ವೈದ್ಯಾಧಿಕಾರಿ ರಮೇಶ ಗುತ್ತೇದಾರ, ಮಹಿಳಾ ಮತ್ತು ಮಕ್ಕಳು ಇಲಾಖೆ ಅಧಿಕಾರಿ ಪ್ರೇಮಮೂರ್ತಿ ಕೆ ಸೇರಿದಂತೆ ಇನ್ನಿತರ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!