ಉದಯವಾಹಿನಿ, ನವದೆಹಲಿ: ವಿವಿಧ ರಾಜ್ಯಗಳ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ವಿಶೇಷ ವಿಮಾನಗಳು ದೆಹಲಿ ಅಥವಾ ಸಮೀಪದ ಪ್ರದೇಶವನ್ನು ಪ್ರವೇಶಿಸಲು ಯಾವುದೇ ನಿರ್ಬಂಧ ಹೇರಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಶನಿವಾರ ಸ್ಪಷ್ಟಪಡಿಸಿದೆ.
ಹೆಲಿಕಾಪ್ಟರ್ ಹಾರಾಟಕ್ಕೆ ಕೇಂದ್ರ ಸರ್ಕಾರ ಅಡ್ಡಿಪಡಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಇಬ್ಬರು ಮುಖ್ಯಮಂತ್ರಿಗಳು ಆರೋಪಿಸಿದ ಬೆನ್ನಲ್ಲೇ ಈ ಸ್ಪಷ್ಟನೆ ನೀಡಿದೆ.
ಇದೇ ವೇಳೆ ಖಾಸಗಿ ವಿಮಾನಗಳ ಹಾರಾಟಕ್ಕೆ ಗೃಹ ಸಚಿವಾಲಯದ ಅನುಮತಿ ಅಗತ್ಯವಿದೆ ಎಂದೂ ತಿಳಿಸಿದೆ.
ಜಿ-20 ಶೃಂಗಸಭೆ ಇರುವ ಕಾರಣ ರಾಜಸ್ಥಾನದ ಸಿಕಾರ್ನಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಲು ಸರ್ಕಾರ ಅನುಮತಿ ನಿರಾಕರಿಸಿತು ಎಂದು ಗೆಹಲೋತ್ ಆರೋಪಿಸಿದ್ದರು.
ದೆಹಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಮಾನ ಹಾರಾಟಕ್ಕೆ ನಿರ್ಬಂಧ ಇರುವ ಕಾರಣ ಜಿ-20 ಅಂಗವಾಗಿ ಏರ್ಪಡಿಸಿರುವ ಭೋಜನಕೂಟದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ’ ಎಂದು ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹೇಳಿದ್ದರು.
ಗೆಹಲೋತ್ ಆರೋಪವನ್ನು ಅಲ್ಲಗಳೆದ ಗೃಹ ಸಚಿವಾಲಯದ ವಕ್ತಾರರು, ‘ರಾಜಸ್ಥಾನ ಮುಖ್ಯಮಂತ್ರಿಗಳು ಸಿಕಾರ್ ಸೇರಿದಂತೆ ನಾಲ್ಕು ಕಡೆಗಳಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ಗಾಗಿ ಮನವಿ ಸಲ್ಲಿಸಿದ್ದರು. ಎಲ್ಲಾ ಕಡೆಗಳಲ್ಲಿ ಅನುಮತಿ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವಾಲಯ ಜನರನ್ನು ಹಾದಿ ತಪ್ಪಿಸುವ ಉದ್ದೇಶದಿಂದ ತಪ್ಪು ಮಾಹಿತಿ ನೀಡುತ್ತಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಆರೋಪಿಸಿದ್ದಾರೆ.
