ಉದಯವಾಹಿನಿ, ಗುವಾಹಟಿ: ತಮ್ಮ ಪತ್ನಿಯು ಕೇಂದ್ರ ಸರ್ಕಾರದಿಂದ ಸಹಾಯಧನ ಪಡೆದಿದ್ದಾರೆ ಎಂಬ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಸೇರಿದಂತೆ ಯಾವುದೇ ಶಿಕ್ಷೆ ಅನುಭವಿಸಲು ಸಿದ್ಧ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.
ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ಉಪನಾಯಕನಾಗಿರುವ ಗೌರವ್‌ ಗೊಗೊಯಿ ಅವರು ಬಿಸ್ವ ಶರ್ಮಾ ಅವರ ಪತ್ನಿ ಕೇಂದ್ರ ಸರ್ಕಾರದಿಂದ ಸಹಾಯಧನ ಪಡೆದುಕೊಂಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ (ಟ್ವಿಟರ್‌)ನಲ್ಲಿ ಬುಧವಾರ ಆರೋಪಿಸಿದ್ದರು.

‘ಪ್ರಧಾನಿ ಮೋದಿ ಅವರು ದೇಶದ ರೈತರ ಆದಾಯ ದ್ವಿಗುಣಗೊಳಿಸುವ ಸಲುವಾಗಿ ಕಿಸಾನ್‌ ಸಂಪದ ಯೋಜನೆಗೆ ಚಾಲನೆ ನೀಡಿದ್ದಾರೆ. ಆದರೆ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ತಮ್ಮ ಪ್ರಭಾವ ಬಳಸಿ ತಮ್ಮ ಪತ್ನಿಯ ಉದ್ಯಮಕ್ಕೆ ₹ 10 ಕೋಟಿ ಸಹಾಯಧನ ಕೊಡಿಸಿದ್ದಾರೆ. ಕೇಂದ್ರದ ಯೋಜನೆಗಳು ಇರುವುದು ಬಿಜೆಪಿಯವರನ್ನು ಶ್ರೀಮಂತಗೊಳಿಸುವುದಕ್ಕಾಗಿಯೇ?’ ಎಂದು ಪ್ರಶ್ನಿಸಿದ್ದರು.
ತಮ್ಮ ಪತ್ನಿ ವಿರುದ್ಧದ ಆರೋಪದ ಬಗ್ಗೆ ಸ್ಪಷ್ಟನೆ ನೀಡಿರುವ ಶರ್ಮಾ, ‘ನಾನು ಮತ್ತೊಮ್ಮೆ ಒತ್ತಿ ಹೇಳುತ್ತಿದ್ದೇನೆ. ನನ್ನ ಪತ್ನಿಯಾಗಲೀ ಅಥವಾ ಆಕೆಗೆ ಸಂಬಂಧಿಸಿದ ಕಂಪನಿಯಾಗಲಿ ಭಾರತ ಸರ್ಕಾರದಿಂದ ಹಣ ಪಡೆದಿಲ್ಲ ಅಥವಾ ಬಳಸಿಕೊಂಡಿಲ್ಲ. ಒಂದುವೇಳೆ ಯಾರಾದರೂ ಇದಕ್ಕೆ ಸಂಬಂಧಿಸಿದ ಸಾಕ್ಷ್ಯ ನೀಡಿದರೆ, ರಾಜಕೀಯ ನಿವೃತ್ತಿ ಸೇರಿದಂತೆ ಯಾವುದೇ ಶಿಕ್ಷೆ ಅನುಭವಿಸಲು ಸಿದ್ಧನಿದ್ದೇನೆ’ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!