ಉದಯವಾಹಿನಿ, ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆ ಇಂದು(ಅ.9) ವಿಶ್ವಕರ್ಮ ಯೋಜನೆಯ ಪರಿಶೀಲನಾ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪಾಲ್ಗೊಳ್ಳಲು ಬಿಜೆಪಿ ನಾಯಕರು ದೆಹಲಿಯ ಕೇಂದ್ರ ಕಚೇರಿಗೆ ಆಗಮಿಸಿದ್ದಾರೆ.
ಬಳಿಕ ಅವರು ಯೋಜನೆಯನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸಲು ತಂಡವನ್ನು ನಿಯೋಜಿಸಲಿದ್ದಾರೆ. ಸಭೆಯಲ್ಲಿ ನೋಂದಣಿ, ತರಬೇತಿ, ಅನುಷ್ಠಾನಗಳ ಬಗ್ಗೆ ಚರ್ಚೆ ನಡೆಯಲಿದೆ.ಇಲ್ಲಿಯವರೆಗೆ 2 ಲಕ್ಷ ಜನರು ವಿಶ್ವಕರ್ಮ ಯೋಜನೆಗೆ ನೋಂದಾಯಿಸಿದ್ದಾರೆ. ಇನ್ನು ಐದು ವರ್ಷಗಳಲ್ಲಿ 30 ಲಕ್ಷ ಜನರು ಈ ಯೋಜನೆಗ ನೋಂದಾಯಿಸಿಕೊಳ್ಳುವ ನಿರೀಕ್ಷೆಯಿದೆ. ಪ್ರತಿ ವರ್ಷ 6 ಲಕ್ಷ ನೋಂದಣಿಗಳನ್ನು ಮಾಡಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 17 ರಂದು ವಿಶ್ವಕರ್ಮ ಯೋಜನೆಗೆ ಚಾಲನೆ ನೀಡಿದ್ದರು. ಈ ಯೋಜನೆಯು ಕುಶಲಕರ್ಮಿಗಳಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.
ಯೋಜನೆ ಅಡಿಯಲ್ಲಿ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಶೇ.5ರ ಬಡ್ಡಿದರದಲ್ಲಿ ₹1 ಲಕ್ಷ (18 ತಿಂಗಳ ಮರುಪಾವತಿ ಅವಧಿಯೊಂದಿಗೆ) ಸಾಲ ನೀಡಲಾಗುತ್ತದೆ. ಬಳಿಕ ಹೆಚ್ಚುವರಿಯಾಗಿ ₹2 ಲಕ್ಷ (30 ತಿಂಗಳ ಮರುಪಾವತಿಯ 2ನೇ ಹಂತದ ಅವಧಿ) ಸಾಲ ನೀಡಲಾಗುತ್ತದೆ. ಮುಂದಿನ 5 ವರ್ಷಗಳ ಅವಧಿಯಲ್ಲಿ ಯೋಜನೆಗಾಗಿ ಕೇಂದ್ರ ಸರ್ಕಾರ 13 ಸಾವಿರ ಕೋಟಿ ಹಣವನ್ನು ಮೀಸಲಿಟ್ಟಿದೆ.ಪಿಎಂ ವಿಶ್ವಕರ್ಮ ಪ್ರಮಾಣಪತ್ರ ಮತ್ತು ಗುರುತಿನ ಚೀಟಿ ಮೂಲಕ ಕುಶಲಕರ್ಮಿಗಳನ್ನು ಗುರುತಿಸಲಾಗುತ್ತದೆ. 5 ರಿಂದ 7 ದಿನಗಳ ಮೂಲ ತರಬೇತಿ ಮತ್ತು 15 ದಿನಗಳ ಅಥವಾ ಅದಕ್ಕಿಂತ ಹೆಚ್ಚಿನ ಸುಧಾರಿತ ತರಬೇತಿಗೆ ದಿನಕ್ಕೆ ₹500 ನೀಡಲಾಗುತ್ತದೆ.
ಪಿಎಂ ವಿಶ್ವಕರ್ಮ ಪೋರ್ಟಲ್‌ನಲ್ಲಿ ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣದೊಂದಿಗೆ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಫಲಾನುಭವಿಗಳ ನೋಂದಣಿ ಮಾಡಲಾಗುತ್ತದೆ.

Leave a Reply

Your email address will not be published. Required fields are marked *

error: Content is protected !!