
ಉದಯವಾಹಿನಿ ಶಿಡ್ಲಘಟ್ಟ: ಗ್ರಾಮದ ಜನರಿಗೆ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು,ಬೀದಿ ದೀಪ, ಚರಂಡಿಗಳ ಸ್ವಚ್ಛತೆ ಮಾಡುವುದು ಬಹಳ ಮುಖ್ಯ. ಹಾಗೇಯೆ ಸ್ವಚ್ಚತೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ಅಗತ್ಯ ಎಂದು ಅಧ್ಯಕ್ಷ ಪ್ರೇಮ ರಮೇಶ್ ತಿಳಿಸಿದರು.ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಗ್ರಾಮ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.ಗ್ರಾಮ ಪಂಚಾಯಿತಿಯಲ್ಲಿ ಸಿಗುವ ಮೂಲಭೂತ ಸೌಲಭ್ಯಗಳೊಂದಿಗೆ ನರೇಗಾ ಯೋಜನೆಗಳನ್ನು ದುರುಪಯೋಗ ಪಡಿಸಿಕೊಳ್ಳದೆ,ಸೂಕ್ತವಾದ ರೀತಿಯಲ್ಲಿ ಉಪಯೋಗಿಸಿಕೊಂಡು ಗ್ರಾಮಗಳ ಅಭಿವೃದ್ಧಿಯನ್ನು ಮಾಡಬೇಕು ಎಂದರು. ಸಭೆಗೆ ಸಾರ್ವಜನಿಕರ ಕೊರತೆ ಇನ್ನು ಗ್ರಾಮ ಪಂಚಾಯತಿ ಗ್ರಾಮ ಸಭೆಯಲ್ಲಿ ಕೇವಲ ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಜಲಗಾರರಿಗೆ ಮಾತ್ರ ಸೀಮಿತವಾಗಿತ್ತು. ಸಾರ್ವಜನಿಕರಿಗೆ ಮಾಹಿತಿ ಇಲ್ಲದೆ ಸಭೆ ಬಿಕೋ ಎನ್ನುವಂತಿತ್ತು. ಗ್ರಾಮ ಪಂಚಾಯಿತಿಯ ಆಡಳಿತವು ನೆಪ ಮಾತ್ರಕ್ಕೆ ಈ ಸಭೆ ಸೀಮಿತವಾಗಿತ್ತು.
ವಿದ್ಯಾರ್ಥಿಗಳಿಂದ ಪ್ಲಾಸ್ಟಿಕ್ ನಿಷೇದ ನಾಟಕ
ತುಮ್ಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ಲಾಸ್ಟಿಕ್ ವಸ್ತುಗಳಿಂದ ಮಾಡಿದ ವೇಷ ಭೂಷಣಗಳನ್ನು ಧರಿಸಿಕೊಂಡು ನಾಟಕ ಪ್ರದರ್ಶಿಸಿದರು. ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಇಲ್ಲದಿದ್ದರೂ, ಅಧಿಕಾರಿಗಳು ಹಾಗೂ ಜನಪ್ರತಿನಿಧಿನಿಗಳಿಗೆ ಮಾತ್ರ ಪ್ಲಾಸ್ಟಿಕ್ ನಿಷೇದದ ಬಗ್ಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಹುಜಗೂರು ರಾಮಣ್ಣ, ಉಪಾಧ್ಯಕ್ಷ ಮಾರುತಿ ಹಾಗೂ ಗ್ರಾ.ಪಂ ಸದಸ್ಯರು, ಗ್ರಂಥಾಪಾಲಕರು, ಗ್ರಾ ಪಂ ಸಿಬ್ಬಂದಿ ಆಶಾಕಾರ್ಯಕರ್ತೆಯರು ಹಾಜರಿದ್ದರು.
