ಉದಯವಾಹಿನಿ, ಕೋಲಾರ: ಜಿಲ್ಲೆಯಲ್ಲಿ ಸರಣಿ ಭೀಕರ ಕೊಲೆ ಪ್ರಕರಣಗಳ ಹಿನ್ನಲೆಯಲ್ಲಿ ಶಿಸ್ತುಕ್ರಮಕ್ಕೆ ಮುಂದಾಗಿರುವ ಪೊಲೀಸ್ ಇಲಾಖೆ ಶ್ರೀನಿವಾಸಪುರದ ಜಿಪಂ ಮಾಜಿ ಅಧ್ಯಕ್ಷ ಶ್ರೀನಿವಾಸ್ ಕೊಲೆ ಹಾಗೂ ಮಾಲೂರಿನ ಗ್ರಾ.ಪಂ ಸದಸ್ಯ ಅನಿಲ್ಕುಮಾರ್ ಕೊಲೆ ಸಂಬಂಧ ಕರ್ತವ್ಯ ಲೋಪದಡಿ ಓರ್ವ ಸಬ್ ಇನ್ಸ್ಪೆಕ್ಟರ್, ಓರ್ವ ಎಎಸ್ಐ ಸೇರಿದಂತೆ ಒಟ್ಟು ೭ ಮಂದಿಯನ್ನು ಅಮಾನತ್ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಆದೇಶ ಹೊರಡಿಸಿದ್ದಾರೆ.
ಕಳೆದ ಅ.೨೩ ರಂದು ಶ್ರೀನಿವಾಸಪುರದ ಕಾಂಗ್ರೆಸ್ ಮುಖಂಡ,ಜಿಪಂ ಮಾಜಿ ಅಧ್ಯಕ್ಷ ಕೌನ್ಸಿಲರ್ ಶ್ರೀನಿವಾಸ್ ಭೀಕರವಾಗಿ ಕೊಲೆಯಾದ ಹಿನ್ನಲೆಯಲ್ಲಿ ಶ್ರೀನಿವಾಸಪುರ ಠಾಣೆ ಸಬ್ಇನ್ಸ್ಪೆಕ್ಟರ್ ಈಶ್ವರಪ್ಪ, ಅದೇ ಠಾಣೆಯ ಮುಖ್ಯ ಪೇದೆ ದೇವರಾಜ್ ರೆಡ್ಡಿ, ಪೇದೆ ಮಂಜುನಾಥ್ರನ್ನು ಅಮಾನತ್ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಮಾಲೂರಿನಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಅನಿಲ್ ಕುಮಾರ್ ಕೊಲೆ ಪ್ರಕರಣದಲ್ಲೂ ಕರ್ತವ್ಯ ಲೋಪದ ಆರೋಪ ಹೊರೆಸಿ ಮಾಲೂರು ಠಾಣೆಯ ಎಎಸ್ಐ ಪ್ರಕಾಶ್ ಸೇರಿ ಇಬ್ಬರು ಪೇದೆಗಳನ್ನು ಅಮಾನತ್ ಮಾಡಿ ಎಸ್ಪಿ ಆದೇಶ ಹೊರಡಿಸಿದ್ದು, ಬೀಟ್ ಕಾನಸ್ಟೇಬಲ್ಗಳಾದ ರಾಮಪ್ಪ, ಅನಂತಮೂರ್ತಿ ಅಮಾನತ್ತಾಗಿರುವ ಪೇದೆಗಳಾಗಿದ್ದಾರೆ.
ಉಳಿದಂತೆ ಇಲಾಖೆಯಲ್ಲಿ ಅಶಿಸ್ತು ಹಿನ್ನಲೆ ಡಿಎಆರ್ ಪೇದೆ ಅನಿಲ್ ಕುಮಾರ್ರನ್ನು ಸಹಾ ಸಸ್ಪೆಂಡ್ ಮಾಡಿ ಎಸ್ಪಿ ನಾರಾಯಣ ಆದೇಶ ಹೊರಡಿಸಿದ್ದಾರೆ.
