ಉದಯವಾಹಿನಿ, ಕೋಲಾರ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್ಗಳಲ್ಲಿ ರೈತರಿಗೆ ಬರುವಂತಹ ಸಹಾಯಧನ, ಹಾಲಿನ ಪ್ರೋತ್ಸಾಹ ಪಾವತಿ ಸೇರಿದಂತೆ ಇನ್ನಿತರೆ ಸೌಲಭ್ಯಗಳ ಹಣವನ್ನು ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಅಧಿಕಾರಿಗಳು ರೈತರಿಗೆ ಯಾವುದೇ ಮಾಹಿತಿ ನೀಡದೆ, ಹಣವನ್ನು ಸಾಲದ ಖಾತೆಗಳಿಗೆ ಜಮೆ ಮಾಡಿಕೊಳ್ಳುತ್ತಿದ್ದು, ಇದರಿಂದ ರೈತರು ಸಾಕಷ್ಟು ತೊಂದರೆಯಲ್ಲಿದ್ದಾರೆ. ಈ ಬಗ್ಗೆ ನೇರವಾಗಿ ಬ್ಯಾಂಕ್ ವ್ಯವಸ್ಥಾಪಕರು ಅಧಿಕಾರಿಗಳನ್ನು ಭೇಟಿಯಾದರೆ ನಮಗೂ ಇದಕ್ಕೂ ಸಂಬಂಧವಿರುವುದಿಲ್ಲ. ಇದು ನಮ್ಮ ಕೇಂದ್ರ ಕಚೇರಿಯ ಆದೇಶವನ್ನು ನಾವು ಪಾಲನೆ ಮಾಡುತ್ತಿದ್ದೇವೆ. ನಿಮಗೆ ಏನಾದರೂ ದೂರುಗಳಿದ್ದರೆ ಪ್ರಧಾನ ಕಚೇರಿಗೆಭೇಟಿ ನೀಡಿ ಪರಿಹರಿಸಿಕೊಳ್ಳಿ ಹೇಳುತ್ತಿದ್ದಾರೆಂದು ಕರ್ನಾಟಕ ರಾಜ್ಯರೈತ ಸಂಘ ಹಾಗೂ ಹಸಿರುಸೇನೆ, ಕೋಲಾರ ಜಿಲ್ಲಾ ಸಮಿತಿಯು ಜಿಲ್ಲಾ ವ್ಯವಸ್ಥಾಪಕರು, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಅವರಿಗೆ ಮನವಿ ನೀಡಿ ಒತ್ತಾಯಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷ ಟಿ.ಎನ್.ರಾಮೇಗೌಡ ಅವರು ಮಾತನಾಡಿ, ಕೆಲವು ಬ್ಯಾಂಕ್ಗಳಲ್ಲಿ ಕಡಿಮೆ ಬಡ್ಡಿ ಎಂದು ಹೇಳಿ ರೈತರ ಹೆಸರಿನಲ್ಲಿ ಪಹಣಿ ಇಟ್ಟು ಬಂಗಾರದ ಸಾಲ ನೀಡುತ್ತಾರೆ. ತದನಂತರ ರೈತರಿಗೆ ಸೂಕ್ತ ಮಾಹಿತಿ ಒದಗಿಸದೆ ಬಡ್ಡಿದರವನ್ನು ಹೆಚ್ಚಳ ಮಾಡಿ ರೈತರಿಗೆ ಕಿರುಕುಳ ನೀಡುತ್ತಾರೆ. ಕೆಲವೊಮ್ಮೆ ಬೆಳೆಸಾಲ ಹಾಗೂ ಬಂಗಾರದ ಆಭರಣ ಸಾಲ ಎರಡು ಒಟ್ಟಿಗೆ ಪಾವತಿಸುವಂತೆ ಒತ್ತಡ ಹೇರುತ್ತಾರೆ. ಇಷ್ಟೆಲ್ಲಾ ಸಮಸ್ಯೆಗಳು ಬ್ಯಾಂಕ್ ಅಧಿಕಾರಿಗಳಿಂದ ತೊಂದರೆ ಆಗುತ್ತಿದ್ದು ಇದರ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಹಾಗೂ ಕೂಡಲೇ ಬ್ಯಾಂಕ್ ಸಿಬ್ಬಂದಿ ಮತ್ತು ಗ್ರಾಹಕರ ಸಭೆ ನಡೆಸಿ ಸೂಕ್ತ ಮಾಹಿತಿ ನೀಡುವಂತೆ ಸೂಚಿಸಬೇಕೆಂದು ಆಗ್ರಹಿಸಿದರು.
