
ಉದಯವಾಹಿನಿ,ಯಾದಗಿರಿ : ಜಿಲ್ಲಾ ಬಾಲ ಮಂದಿರಕ್ಕೆ ಉಪ ಲೋಕಾಯುಕ್ತರು ಹಾಗೂ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಕೆ.ಎನ್.ಫಣೀಂದ್ರ ಅವರು ಅನಿರೀಕ್ಷಿತ ಭೇಟಿ ನೀಡಿ, ಬಾಲಮಂದಿರದ ಮೂಲ ಸೌಕರ್ಯ, ಪೌಷ್ಠಿಕ ಆಹಾರ, ಸ್ವಚ್ಛತೆ,ಮಕ್ಕಳ ಶಿಕ್ಷಣದ ಕುರಿತು ಪರಿಶೀಲಿಸಿದರು.ಮಕ್ಕಳೊಂದಿಗೆ ಸಮಾಲೋಚಿಸಿದ ಗೌರವಾನ್ವಿತರು ಮಕ್ಕಳಿಗೆ ಉತ್ತಮ ಶಿಕ್ಷಣ, ಸಾಮಾಜಿಕ ಜವಾಬ್ದಾರಿಗಳು, ಅವರ ಭವಿಷ್ಯದ ಕನಸಿನ ಕುರಿತು ಸಮಾಲೋಚಿಸಿದರು.
ಬಾಲ ಮಂದಿರದಲ್ಲಿ ಮಕ್ಕಳಿಗೆ ಸರಿಯಾದ ಪೌಷ್ಠಿಕ ಆಹಾರ, ಉತ್ತಮ ಗಾಳಿ, ಬೆಳಕಿನ ವ್ಯವಸ್ಥೆ, ಸ್ವಚ್ಛ ವಾತಾವರಣ ನಿರ್ಮಿಸುವ ಜೊತೆಗೆ ಅವರ ಶಿಕ್ಷಣಕ್ಕೆ ಅನುಕೂಲವಾಗುವ ಗ್ರಂಥಾಲಯ, ಕಂಪ್ಯೂಟರ್ ಹಾಗೂ ಉನ್ನತ ಜ್ಞಾನಾರ್ಜನೆಗಾಗಿ ಸ್ಪರ್ಧಾತ್ಮಕ,ನಾಗರಿಕ ಸೇವಾ ಪರೀಕ್ಷೆ ಎದುರಿಸಲು ಮಾಸಿಕ ವಿಶೇಷ ಉಪನ್ಯಾಸ,ಪುಸ್ತಕ ಗಳ ವ್ಯವಸ್ಥೆ ಕಲ್ಪಿಸುವ ಕುರಿತು ಮಾಹಿತಿ ಪಡೆದು,ಸೂಕ್ತ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಭಾರತ ಸಂವಿಧಾನ ಅರಿಯಲು ಮಕ್ಕಳಿಗೆ ಅರ್ಥೈಸುವ ಉಪನ್ಯಾಸಕರನ್ನು ಕರೆಸಿ ತಿಳಿಯುವ ರೀತಿಯಲ್ಲಿ ಪಾಠ ಹೇಳಲು ಸೂಚಿಸಿದ ಅವರು, ಇಂದಿನ ಪ್ರಜೆಗಳು ನಾಳೆಯ ಜವಾಬ್ದಾರಿಯುತ ಪ್ರಜೆಗಳು ಎಂಬ ಸಂದೇಶ ಸಾರುವ ತತ್ವ ಅಳವಡಿಸಿಕೊಳ್ಳಬೇಕು. ಜಿಲ್ಲೆಯ ಮುಖ್ಯ ಹುದ್ದೆಗಳಾದ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಹಿಳೆಯರಿದ್ದು, ಅವರನ್ನು ಆದರ್ಶ ವ್ಯಕ್ತಿಯಾಗಿ ಬಿಂಬಿಸಿ ಅವರಂತೆ ಉನ್ನತ ಸ್ಥಾನಕ್ಕೆ ಏರುವ ಗುರಿಯನ್ನಿಟ್ಟುಕೊಳ್ಳಲು,ದೇಶಕ್ಕೆ, ಸಮಾಜಕ್ಕೆ ಮುಂದೆ ಕೊಡುಗೆ ನೀಡಲು ಅವರು ತಿಳಿಹೇಳಿದರು.ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಯೋಗ, ಪ್ರಾಣಾಯಾಮ. ವ್ಯಕ್ತಿತ್ವ ವಿಕಸನಕ್ಕೆ ಆಧ್ಯಾತ್ಮಿಕ ಬೋಧನೆಯ ಉಪನ್ಯಾಸಕರನ್ನು ಆಹ್ವಾನಿಸಿ ಭೋದಿಸಲು ತಿಳಿಸಿದ ಅವರು, ಬಾಲಮಂದಿರವು ಉತ್ತಮವಾಗಿ ನಿರ್ವಹಿಸಿದ್ದು ಮಕ್ಕಳ ಸೌಜನ್ಯದಿಂದ ವರ್ತಿಸುವ ರೀತಿಯು ನಮಗೆ ಖುಷಿ ತಂದಿದೆ ಎಂದು ಅವರು ಹರ್ಷಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶ್ರೀಮತಿ ಸುಶೀಲಾ.ಬಿ, ಕರ್ನಾಟಕ ಲೋಕಾಯುಕ್ತ ಹೆಚ್ಚುವರಿ ನಿಬಂಧಕರು ಶ್ರೀ ಶಶಿಕಾಂತ ಭಾವಿಕಟ್ಟಿ, ಉಪ ನಿಬಂಧಕರು ಚನ್ನಕೇಶವ ರೆಡ್ಡಿ ಎಂ.ವಿ, ಮಾನ್ಯ ಉಪ ಲೋಕಾಯುಕ್ತರ ಆಪ್ತಕಾರ್ಯದರ್ಶಿ ಕಿರಣ ಪ್ರಲ್ಹಾದ್ ರಾವ್ ಮುತಾಲಿಕ್ ಪಾಟೀಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಗರಿಮಾ ಪನ್ವಾರ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಶ್ರೀ. ರವೀಂದ್ರ ಎಲ್. ಹೊನೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಜಿ.ಸಂಗೀತಾ, ಇತರರು ಉಪಸ್ಥಿತರಿದ್ದರು.
