ಉದಯವಾಹಿನಿ, ಬೆಂಗಳೂರು: ಕೆಳವರ್ಗದ ಅಧಿಕಾರಿಯನ್ನು ಉನ್ನತ ಹುದ್ದೆಗೆ ನಿಯೋಜಿಸಲು ಕೇವಲ ಮುಖ್ಯಮಂತ್ರಿಗಳ ಸಹಿ ಇದ್ದರೆ ವರ್ಗಾವಣೆ ಆದೇಶಕ್ಕೆ ಮಾನ್ಯತೆ ಇಲ್ಲ ಎಂದು ಹೈಕೋರ್ಟ್ ಹೇಳಿದೆ.
ಅಂತಹ ವರ್ಗಾವಣೆ ಆದೇಶಗಳು ಮುಖ್ಯಮಂತ್ರಿಗಳ ಸಹಿಯನ್ನು ಹೊಂದಿದ್ದರೂ ಸಹ, ಅರ್ಹ ವ್ಯಕ್ತಿಗಳ ಲಭ್ಯತೆಯಿಲ್ಲದಿರುವ ಬಗ್ಗೆ ಮುಖ್ಯಮಂತ್ರಿಗೆ ತಿಳುವಳಿಕೆ ನೀಡಲು ಕಾರಣಗಳ ಅನುಪಸ್ಥಿತಿ ಕಂಡುಕೊಂಡಿರುವುದರಿಂದ ಅಂತಹ ಆದೇಶಗಳನ್ನು ಕಾನೂನುಬದ್ಧ ಆದೇಶ ಎಂದು ಹೇಳಲಾಗುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ
ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್ ಮತ್ತು ರಾಜೇಶ್ ರೈ ಕೆ ಅವರನ್ನೊಳಗೊಂಡ ಪೀಠ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿ ಡಾ.ಪ್ರಜ್ಞಾ ಅಮ್ಮೆಂಬಳ ಸಲ್ಲಿಸಿದ ಅರ್ಜಿಯ ಇತ್ತೀಚಿನ ತೀರ್ಪಿನಲ್ಲಿ ಹೀಗೆ ಹೇಳಿದೆ.
೨೦೨೩ ರ ಆಗಸ್ಟ್ ೨ ರ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ಆದೇಶವ ಪ್ರಶ್ನಿಸಿ ಅಮ್ಮೆಂಬಳ ಅವರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹೆಚ್ಚುವರಿ ನಿರ್ದೇಶಕ ಪಥರಾಜು ವಿ ಅವರು ಸಲ್ಲಿಸಿದ ಅರ್ಜಿಗೆ ಅವಕಾಶ ಕೊಟ್ಟಿದ್ದರು.ಅಮ್ಮೆಂಬಳ ಅವರನ್ನು ೨೦೦೬ ರಲ್ಲಿ ನೇರ ನೇಮಕಾತಿ ಮೂಲಕ ತಹಶೀಲ್ದಾರ್ ಆಗಿ ನೇಮಿಸಲಾಯಿತು ಮತ್ತು ೨೦೧೫ ರಲ್ಲಿ ಕೆಎಎಸ್ (ಜೂನಿಯರ್ ಸ್ಕೇಲ್) ಮತ್ತು ಜನವರಿ ೨೦೨೧ ರಲ್ಲಿ ಕೆಎಎಸ್ (ಸೀನಿಯರ್ ಸ್ಕೇಲ್) ಗೆ ಬಡ್ತಿ ನೀಡಲಾಯಿತು. ಅಮ್ಮೆಂಬಳ ಅವರನ್ನು ಜುಲೈ ೨೦೨೩ ರಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೆಚ್ಚುವರಿ ನಿರ್ದೇಶಕರಾಗಿ ವರ್ಗಾಯಿಸಲಾಯಿತು.ಪಥರಾಜು ಅವರು ಈಗಾಗಲೇ ಈ ಹುದ್ದೆಯಲ್ಲಿದ್ದು, ಮುಖ್ಯಮಂತ್ರಿಗಳ ಪೂರ್ವಾನುಮತಿಯಿಲ್ಲದೆ ಅಮ್ಮೆಂಬಳ ಅವರನ್ನು ಈ ಹುದ್ದೆಗೆ ವರ್ಗಾಯಿಸಲಾಗಿದೆ ಎಂದು ನ್ಯಾಯಮಂಡಳಿಯಲ್ಲಿ ಅಮ್ಮೆಂಬಳ ವರ್ಗಾವಣೆಯನ್ನು ಪ್ರಶ್ನಿಸಿದರು.
