ಉದಯವಾಹಿನಿ, ಬೆಂಗಳೂರು: ಈಗಾಗಲೇ ದರ ಏರಿಕೆಯಿಂದ ಬಸವಳಿದಿರುವ ರಾಜ್ಯದ ಜನತೆಗೆ ಸದ್ಯದಲ್ಲೇ ಮತ್ತೊಂದು ದರ ಏರಿಕೆಯ ಶಾಕ್ ಕಾದಿದೆ. ಏಕೆಂದರೆ, ಒಕ್ಕೂಟಗಳು ನಷ್ಟದಲ್ಲಿರುವ ಕಾರಣ, ಹಾಲಿನ ದರ ಪರಿಷ್ಕರಣೆ ಮಾಡಲು ಕೆಎಂಎಫ್ ಮುಂದಾಗಿದೆ. ಈ ಕುರಿತು ಜನವರಿಯಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕೆಎಂಎಪ್ ಮುಂದಾಗಿದೆ. ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ನಂದಿನಿ ಹಾಲಿನ ದರ ಹೆಚ್ಚಳ ಮಾಡಿತ್ತು. ಇದೀಗ ಹಾಲಿನ ದರ ಮತ್ತೆ ಹೆಚ್ಚಳ ಮಾಡಲು ಕೆಎಂಎಫ್ ಸಿದ್ದತೆ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಕೆಎಂಎಫ್ ಅಧಿಕಾರಿಗಳ ಮಟ್ಟದಲ್ಲಿ ದರ ಏರಿಕೆ ಕುರಿತು ಚಿಂತನೆ ನಡೆದಿದೆ. ಹಾಲಿನ ದರ ಪರಿಷ್ಕರಣೆಗೆ 14 ಹಾಲು ಒಕ್ಕೂಟದಿಂದ ಕೆಎಂಎಫ್ ಮನವಿ ಬಂದಿದೆ. ಹೀಗಾಗಿ ಅಧಿವೇಶನದಿಂದ ಸಿಎಂ ಬಂದ ಬಳಿಕ ಸಿದ್ದರಾಮಯ್ಯರ ಭೇಟಿ ಮಾಡಿ ನಂದಿನಿ ಹಾಲಿನ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಲು ಕೆಎಂಎಫ್ ಸಿದ್ಧತೆ ಮಾಡಿಕೊಂಡಿದೆ. ಹೀಗಾಗಿ ಹೊಸ ವರ್ಷದ ಆರಂಭದಲ್ಲೇ ನಂದಿನಿ ಹಾಲಿನ ದರ ಏರಿಕೆ ಪ್ರಸ್ತಾವನೆ ಸಲ್ಲಿಸಲು ಕೆಎಂಎಫ್ ಆಡಳಿತ ಮಂಡಳಿ ತೀರ್ಮಾನಿಸಿದೆ.
ಈ ಕುರಿತು ಸಿಎಂ ಸಿದ್ದರಾಮಯ್ಯ ಅವರನ್ನು ಜನವರಿ ಆರಂಭದಲ್ಲಿ ಭೇಟಿಯಾಗಲು ಕೆಎಂಎಫ್ ಅಧ್ಯಕ್ಷ, ಎಂಡಿ ನಿರ್ಧರಿಸಿದ್ದಾರೆ. ಕೆಎಂಎಫ್ ಆರ್ಥಿಕ ನಷ್ಟದ ಹಿನ್ನಲೆ 5 ರೂ. ಪ್ರತಿ ಲೀಟರ್ಗೆ ದರ ಹೆಚ್ಚಿಸುವಂತೆ ಮನವಿ ಮಾಡಲು ನಿರ್ಧರಿಸಿದೆ. ಕಳೆದ ಆಗಸ್ಟ್ 1 ರಿಂದ ನಂದಿನಿ ಪ್ರತೀ ಲೀಟರ್ ಗೆ 3 ರೂ.ಹೆಚ್ಚಳ ಮಾಡಿತ್ತು. 5 ರೂ ಹೆಚ್ಚಳ ಮಾಡಲು ಮನವಿ ಮಾಡಿದ್ದಕ್ಕೆ ಕೇವಲ ಮೂರು ರೂ.ಹೆಚ್ಚಳ ಮಾಡಿತ್ತು. ಹೀಗಾಗಿ ಲೀಟರ್ ಗೆ 3 ರೂ ಹೆಚ್ಚುವರಿ ಹಣ ರೈತರಿಗೆ ಕೆಎಂಎಫ್ ನೀಡಿತ್ತು.
