ಉದಯವಾಹಿನಿ, ಬೆಳಗಾವಿ: ಬರಗಾಲದ ಹಿನ್ನೆಲೆಯಲ್ಲಿ ಮೋಡ ಬಿತ್ತನೆಗೆ ತಾವೂ ಕೂಡ ಸಕಾರಾತ್ಮಕ ನಿಲುವು ಹೊಂದಿರುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ವಿಧಾನಸಭೆಯ ಶೂನ್ಯ ವೇಳೆಯಲ್ಲಿ ರಾಣೆಬೆನ್ನೂರಿನ ಶಾಸಕ ಪ್ರಕಾಶ್ ಕೋಳಿವಾಡ ವಿಷಯ ಪ್ರಸ್ತಾಪಿಸಿ, ಇಂದಿನಿಂದ ಡಿಸೆಂಬರ್ 11 ರವರೆಗೂ ರಾಜ್ಯದಲ್ಲಿ ಮೋಡಗಳು ಹೆಚ್ಚಾಗಿವೆ. ಮೋಡ ಬಿತ್ತನೆ ಮಾಡಿದರೆ ಒಳ್ಳೆಯ ಫಲಿತಾಂಶ ಬರಲಿದೆ. ಮಳೆಯಾದರೆ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಸುಧಾರಿಸುತ್ತವೆ. ಕಡಿಮೆ ಖರ್ಚಿನಲ್ಲಿ ಮೋಡ ಬಿತ್ತನೆಗೆ ಅವಕಾಶವಿದೆ.
ಈ ನಿಟ್ಟಿನಲ್ಲಿ ತಂತ್ರಜ್ಞರ ಜೊತೆ ತಾವು ಚರ್ಚೆ ಮಾಡಿದ್ದು, ಎಲ್ಲಾ ರೀತಿಯ ಸಿದ್ಧತೆಗಳೂ ಲಭ್ಯ ಇವೆ. ಸರ್ಕಾರ ಇಂದೇ ತೀರ್ಮಾನ ಮಾಡಿದರೆ ಮೋಡ ಬಿತ್ತನೆಯಾಗಲಿದೆ. ಜನರಿಗೆ ಅನುಕೂಲವಾಗಲಿದೆ ಎಂದು ಗಮನ ಸೆಳೆದರು. ಆಡಳಿತ ಪಕ್ಷದ ಶಾಸಕ ಕೋ.ನ.ರೆಡ್ಡಿ ಇದಕ್ಕೆ ಬೆಂಬಲ ವ್ಯಕ್ತಪಡಿಸಿದರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮೋಡ ಬಿತ್ತನೆಗೆ ಉಪಮುಖ್ಯಮಂತ್ರಿಯವರು ಉತ್ತರಿಸುತ್ತಾರೆ ಎಂದು ಹೇಳಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಕಾಶ್ ಕೋಳಿವಾಡ ಅವರು ಈ ನಿಟ್ಟಿನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಮೋಡ ಬಿತ್ತನೆ ಮಾಡುವ ಕಂಪನಿಗಳ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆ ಮಾಡಲು ಕೂಡ ಅವರು ಆಸಕ್ತಿ ತೋರಿಸಿದ್ದಾರೆ. ಜನರಿಗೆ ಒಳ್ಳೆಯದನ್ನ ಮಾಡಬೇಕೆನ್ನುವ ಅವರ ಆಸಕ್ತಿ ಶ್ಲಾಘನೀಯ. ನಾನು ಕೂಡ ಮೋಡ ಬಿತ್ತನೆಯ ಪರವಾಗಿದ್ದೇನೆ. ಆದರೆ, ಕೆಲವು ತಾಂತ್ರಿಕ ತೊಂದರೆಗಳಿವೆ.
