ಉದಯವಾಹಿನಿ, ಬೆಂಗಳೂರು: ಮುಂದಿನ 5 ವರ್ಷದ ಅವಧಿಯಲ್ಲಿ ರಾಜ್ಯದ 10ರಿಂದ 15 ಸಾವಿರ ಎಕರೆ ಪ್ರದೇಶದಲ್ಲಿ ಗಂಧದ ಮರ ಬೆಳೆಸುವ ಮೂಲಕ ಶ್ರೀಗಂಧದ ನಾಡು ಎಂಬ ಗತವೈಭವ ಮರುಸ್ಥಾಪನೆಗೆ ರಾಜ್ಯ ಸರ್ಕಾರ ಸಿದ್ಧತೆ ಕೈಗೊಂಡಿದೆ.
ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಮಾಹಿತಿ ಹಂಚಿಕೊಂಡಿದ್ದು, ರಾಜ್ಯವನ್ನು ಮರಳಿ ‘ಗಂಧದ ಗುಡಿ’ಯಾಗಿಸುವ ನಿಟ್ಟಿನಲ್ಲಿ ಕೆಎಸ್ಡಿಎಲ್ ನಿಂದ ಯೋಜನೆ ರೂಪಿಸಲಾಗಿದೆ. ಪ್ರತಿ ವರ್ಷ 1,000 ಎಕರೆ ಪ್ರದೇಶದಲ್ಲಿ ರೈತರು, ಖಾಸಗಿ ಸಹಭಾಗಿತ್ವದಲ್ಲಿ ಶ್ರೀಗಂಧ ಬೆಳೆಯಲು ಯೋಜನೆ ರೂಪಿಸಲಾಗಿದೆ. ಮುಂದಿನ ಐದು ವರ್ಷದಲ್ಲಿ 15 ಸಾವಿರ ಎಕರೆ ಪ್ರದೇಶದಲ್ಲಿ ಶ್ರೀಗಂಧ ಬೆಳೆಯುವ ಗುರಿ ಹೊಂದಿದ್ದು, ಇದರಿಂದ ರೈತರಿಗೆ ಆಕರ್ಷಕ ಆದಾಯ ಲಭಿಸಲಿದೆ ಎಂದು ತಿಳಿಸಿದ್ದಾರೆ.
