ಉದಯವಾಹಿನಿ, ಚಿಂತಾಮಣಿ: ತಾಲ್ಲೂಕಿನ ಕೆಂದನಹಳ್ಳಿಯಲ್ಲಿ ಮನೆಯ ಪಕ್ಕದ ಶೆಡ್‌ನಲ್ಲಿ ಹಾಕಿದ್ದ ಸುಮಾರು ₹1.45 ಲಕ್ಷ ಬೆಲೆ ಬಾಳುವ 11 ಕುರಿಗಳನ್ನು ಗುರುವಾರ ರಾತ್ರಿ ಕಳ್ಳರು ಕಳ್ಳತನ ಮಾಡಿದ್ದಾರೆ ಎಂದು ಗ್ರಾಮಾಂತರ ಠಾಣೆಗೆ ಶನಿವಾರ ದೂರು ದಾಖಲಾಗಿದೆ. ಯಲ್ಲಪ್ಪ ಕುರಿಗಳನ್ನು ಕಳೆದುಕೊಂಡ ವ್ಯಕ್ತಿ.
ಅವರು ಕೃಷಿ ಮತ್ತು ಜಾನುವಾರು ಸಾಗಾಣಿಕೆಯಿಂದ ಜೀವನ ಸಾಗಿಸುತ್ತಿದ್ದರು. ಅವರ ಬಳಿಯಲ್ಲಿ ಐದು ಟಗರು ಹಾಗೂ 6 ಕುರಿಗಳಿದ್ದವು. ಅವುಗಳನ್ನು ಮನೆಯ ಪಕ್ಕದಲ್ಲಿನ ಶೆಡ್‌ನಲ್ಲಿ ಹಾಕುತ್ತಿದ್ದರು. ಡಿ.28ರಂದು ಸಂಜೆ 6 ಗಂಟೆಗೆ ಕುರಿಗಳನ್ನು ಎಂದಿನಂತೆ ಶೆಡ್‌ನಲ್ಲಿ ಹಾಕಿ ಬೀಗ ಹಾಕಿದ್ದಾರೆ. ರಾತ್ರಿ ಸುಮಾರು 9 ಗಂಟೆ ಸಮಯದಲ್ಲಿ ಅವರ ತಂದೆಗೆ ಉಷಾರಿಲ್ಲದ ಕಾರಣ ಚಿಂತಾಮಣಿಯ ಆಸ್ಪತ್ರೆಗೆ ಹೋಗಿದ್ದಾರೆ. ಮನೆಯಲ್ಲಿ ಅವರ ಹೆಂಡತಿ ಹಾಗೂ ತಾಯಿ ಮಾತ್ರ ಇದ್ದರು. ರಾತ್ರಿ ಯಾರೋ ಕಳ್ಳರು ಶೆಡ್‌ ಬೀಗ ಮುರಿದು 11 ಕುರಿಗಳನ್ನು ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮರು ದಿನ ಬೆಳಿಗ್ಗೆ ಅವರ ತಾಯಿ ಮನೆಯಿಂದ ಹೊರಗೆ ಬಂದು ನೋಡಿದಾಗ ಕುರಿಗಳ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಸುತ್ತಮುತ್ತಲು ಎಲ್ಲಾ ಕಡೆ ಹುಡುಕಾಡಿದರೂ ಕುರಿಗಳು ಸಿಗದಿದ್ದ ಕಾರಣ ತಡವಾಗಿ ಬಂದು ದೂರು ನೀಡುತ್ತಿದ್ದೇವೆ. ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!