ಉದಯವಾಹಿನಿ, ಹೊಸಕೋಟೆ: ನಗರಕ್ಕೆ ಕಸದ ವಿಲೇವಾರಿ ಒಂದು ಸವಾಲಾಗಿ ಪರಿಣಮಿಸಿದ್ದು, ನಗರದ ಖಾಲಿ ನಿವೇಶನಗಳು ತ್ಯಾಜ್ಯ ವಿಲೇವಾರಿ ತಾಣವಾಗಿ ಪರಿಣಮಿಸುತ್ತಿದ್ದ, ಅಕ್ಕಪಕ್ಕದ ಮನೆಯವರು ಭಯದಿಂದ ಜೀವನ ನಡೆಸುವ ವಾತಾವರಣ ನಿರ್ಮಾಣವಾಗಿದೆ.ಖಾಲಿ ನಿವೇಶನಗಳಲ್ಲಿ ಕಸ ಸುರಿಯುತ್ತಿರುವುದರಿಂದ ಅಶುಚಿತ್ವ ತಾಂಡವವಾಡುತ್ತಿತು.
ದುರ್ವಾಸನೆ ಬೀರುತ್ತದೆ. ಅಲ್ಲದೆ ವಿಷಜಂತುಗಳು ಹೆಚ್ಚಾಗಿದೆ. ಈ ಬಗ್ಗೆ ಯಾರನ್ನು ಪ್ರಶ್ನಿಸಬೇಕೆಂದು ತಿಳಿಯದೆ ಸುತ್ತಮುತ್ತಲಿನ ಮನೆಯವರು ಆತಂಕದಿಂದಲೇ ದಿನ ದೂಡುವಂತಾಗಿದೆ.
ನಿತ್ಯ ಬೆಳಗಿನ ಜಾವ ಮನೆ ಬಾಗಿಲಿಗೆ ನಗರಸಭೆಯ ಕಸ ವಿಲೇವಾರಿ ವಾಹನ ಬಂದರೂ ಕಸ ನೀಡದ ನಗರವಾಸಿಗಳು ಹಾಗೂ ಮಳಿಗೆದಾರರು ಖಾಲಿ ನಿವೇಶನಗಳಲ್ಲಿ ಕಸ ಸುರಿಯುತ್ತಿದ್ದಾರೆ. ಇದರಿಂದ ನಗರದ ಅಂದ ಮತ್ತು ಆರೋಗ್ಯ ಎರಡೂ ಹಾಳಾಗುತ್ತಿದೆ.ಖಾಲಿ ನಿವೇಶನಗಳಲ್ಲಿ ಕಸಕಡ್ಡಿ ತುಂಬಿರುವುದರಿಂದ ಇಲಿ, ಹಾವುಗಳು ಮತ್ತು ಸೊಳ್ಳೆಗಳ ಆವಾಸ ಸ್ಥಾನವಾಗಿದೆ. ಇವು ಆಗ್ಗಾಗ್ಗೆ ಮನೆಗಳಿಗೆ ನುಗ್ಗಿ ಕಾಟ ಕೊಡುತ್ತಿವೆ ಎನ್ನುತ್ತಾರೆ ಸ್ಥಳೀಯರು.
ಖಾಲಿನಿವೇಶನ ಮೂಲಕ ಹಾದು ಹೋಗಿರುವ ಚರಂಡಿಗಳಲ್ಲಿ ತ್ಯಾಜ್ಯ ಸೇರಿಕೊಂಡು ಕೊಳಚೆ ನೀರು ಸರಾಗಿ ಹರಿಯದೇ, ಒಂದೆಡೆ ಶೇಖರಣೆಗೊಂಡು ದುರ್ನಾತ ಬೀರುತ್ತಿದೆ.
