ಉದಯವಾಹಿನಿ,ಸಿಂಧನೂರು: ಮಿಲಿಯಾಂತರ ಭಾರತೀಯರ ಪರವಾಗಿ ನಿಂತು, ಸ್ವಾತಂತ್ರ್ಯದ ಧ್ಯೇಯಕ್ಕಾಗಿ, ನನ್ನ ಜೀವನವನ್ನು ನೀಡಲು ಸಿದ್ಧನಿದ್ದೇನೆ. ಸತ್ಯಕ್ಕೆ ಏನಾದರೂ ಮಹತ್ವವಿದ್ದಲ್ಲಿ, ದೇಶದ ಜನ ಮುಂದೊಂದು ದಿನ ನನ್ನ ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ.” ಎಂಬುದು ಸ್ವಾತಂತ್ರ್ಯ ಸಂಗ್ರಾಮದ ಜ್ವಾಲೆಗೆ ತನ್ನ ರಕ್ತ ತರ್ಪಣ ಮಾಡಿದ ಧೀರನೊಬ್ಬನ ನುಡಿಗಳು! ಆ ಧೀರನೇ, ನೇತಾಜಿ ಸುಭಾಷ್ ಚಂದ್ರ ಬೋಸ್. ದಿನೇ ದಿನೇ ಸಾಂಸ್ಕೃತಿಕವಾಗಿ, ನೈತಿಕವಾಗಿ ಅಧಃಪತನ ಹೊಂದುತ್ತಿರುವ ಪ್ರಸಕ್ತ ಸಾಮಾಜಿಕ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ನಡುವೆ ಸ್ವಾತಂತ್ರ್ಯ ಹೋರಾಟದ ಮಹಾನ್ ಕ್ರಾಂತಿಕಾರಿಗಳಾದ ನೇತಾಜಿ, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಖುದಿರಾಮ್ ಬೋಸ್, ಅಶ್ವಾಖುಲ್ಲಾ ಖಾನ್ ಹಾಗೂ ಇನ್ನಿತರ ಉನ್ನತ ವಿಚಾರ, ಆದರ್ಶ ಹಾಗೂ ಮೌಲ್ಯಗಳನ್ನು ವಿದ್ಯಾರ್ಥಿಗಳ ನಡುವೆ ಕೊಂಡ್ಯೊಯ್ಯುವುದು ಅತ್ಯವಶ್ಯಕವಾಗಿದೆ.ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಪ್ರತಿಯೊಬ್ಬರಿಗೂ ಶಿಕ್ಷಣ, ಉದ್ಯೋಗ, ಹೆಣ್ಣು ಮಕ್ಕಳು ಘನತೆ ಗೌರವದಿಂದ ಬದುಕುವ ಸಮ ಸಮಾಜ ನಿರ್ಮಾಣದ ಕನಸನ್ನು ಕಂಡಿದ್ದರು. ಆದರೆ ಅದಕ್ಕೆ ತದ್ವಿರುದ್ಧವಾಗಿ ಪ್ರಸ್ತುತ, ಶಿಕ್ಷಣದ ವ್ಯಾಪಾರೀಕರಣ, ನಿರುದ್ಯೋಗ, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಲೇ ಇವೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ನೇತಾಜಿಯವರ ವಿಚಾರಗಳನ್ನು ಅರಿತು, ಮೈಗೂಡಿಸಿಕೊಂಡು ಅನ್ಯಾಯ ಹಾಗೂ ಅಸತ್ಯದೊಂದಿಗೆ ಹೋರಾಡುತ್ತಾ ನೇತಾಜಿ ಅವರ ಕನಸಿನ ಭಾರತವನ್ನು ನಿರ್ಮಿಸುವ ಸಂಕಲ್ಪ ಮಾಡಬೇಕಿದೆ.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಉನ್ನತ ಸಂಸ್ಕೃತಿ, ನೀತಿ-ನೈತಿಕತೆಗಳನ್ನು ಮೇಲೆತ್ತುವ ಉದ್ದೇಶದೊಂದಿಗೆ ಜನವರಿ 23ರ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 127ನೇ ಜನ್ಮ ವಾರ್ಷಿಕದ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಹಲವಾರು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನಡುವೆ ಆಯೋಜಿಸಲಾಗಿದ್ದ *ಪ್ರಬಂಧ, ರಸಪ್ರಶ್ನೆ ಹಾಗೂ ಚಿತ್ರಕಲೆ* ಶಾಲಾ ಮಟ್ಟದ ಸ್ಪರ್ಧೆಗಳ ವಿಜೇತರಿಗೆ ಇಂದು *ಆದರ್ಶ ಪ್ರೌಢಶಾಲೆ ಸಿಂಧನೂರಿನಲ್ಲಿ ಬಹುಮಾನಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಬಸವರಾಜ್, ಶಾಲಾ ಹಿರಿಯ ಶಿಕ್ಷಕರಾದ ಶ್ರೀನಿವಾಸ್, ಸಂಘಟನೆ ಪದಾಧಿಕಾರಿಗಳು ವಿದ್ಯಾರ್ಥಿಗಳು ಇದ್ದರು.
