ಉದಯವಾಹಿನಿ, ವಿಜಯಪುರ: ಈ ದೇಶದ ಮೊದಲ ಚಳವಳಿಗಾರ ಜ್ಯೋತಿಬಾಪುಲೆ ಅವರಿಗೂ ಅಸ್ಪೃಶ್ಯತೆಯ ಅಪಮಾನ ಅಂಟಿತ್ತು. ಇದಕ್ಕೆಲ್ಲ ಶಿಕ್ಷಣವೇ ಪರಿಹಾರ ಎಂದು ಪ್ರಪ್ರಥಮ ಬಾರಿಗೆ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ದೇಶದಲ್ಲಿ ತೆಗೆದ ಮಹಾತ್ಮ ಜ್ಯೋತಿಬಾ ಫುಲೆ ಮಹನೀಯರು ಎಂದು ಬಿಎಸ್ ಪಿ ರಾಜ್ಯ ವಕ್ತಾರ ಸಿ.ಕೆ. ತೂರವಿ ಅವರು ಹೇಳಿದರು.
ವಿಜಯಪುರ ನಗರದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಸಮೀಪದ ಐಬಿಯಲ್ಲಿ ಇತ್ತೀಚೆಗೆ ದಲಿತ ಸಮರ ಸೇನೆ-ಕರ್ನಾಟಕ ಜಿಲ್ಲಾ ಶಾಖೆ ವಿಜಯಪುರ ವತಿಯಿಂದ ಹಮ್ಮಿಕೊಂಡಿದ್ದ ದಲಿತ ಚಳವಳಿಯ ಐವತ್ತು ವರ್ಷಗಳು ಹಾಗೂ ಜಿಲ್ಲಾ ಸಂಚಾಲನ ಸಭೆಯ ಉದ್ದೇಶಿಸಿ ಮಾತನಾಡಿದರು.
ಬಿ ಕೃಷ್ಣಪ್ಪ, ದೇವನೂರು ಮಹಾದೇವ, ಡಾ. ಸಿದ್ದಲಿಂಗಯ್ಯ, ಮಂಗಳೂರು ವಿಜಯ ಇನ್ನು ಮುಂತಾದ ಮಹನೀಯರಿಂದ ಸಂಘಟನೆಗೊಂಡ ಡಿಎಸ್ಎಸ್ ಹಕ್ಕು ವಂಚಿತರಿಗೆ, ನ್ಯಾಯ ವಂಚಿತರಿಗೆ, ಅಸಹಾಯಕರಿಗೆ, ಭೂ ರಹಿತರಿಗೆ ರಕ್ಷಾ ಕವಚವಾಗಿ ಕೆಲಸ ಮಾಡಿದ್ದು ಮಾನನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಕೀಲರಾದ ಉತ್ತಮ್, ಆನಂದ್ ರವರು ಜಾಗೃತರಾಗಿ, ಚಿಂತಿಸಿ, ಒಂದಾಗಿ ಎಂದ ಬಾಬಾ ಸಾಹೇಬರ ನುಡಿಗಳೆ ನಮಗೆ ದಾರಿದೀಪಗಳು. ನ್ಯಾಯ ಪಡೆಯಬೇಕಾದ ನಾವುಗಳು ನ್ಯಾಯ ನೀಡುವಂತಾಗಲು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸೂಚಿಸಿದ ಶಕ್ತಿ ಶಿಕ್ಷಣವೇ ಕಾರಣ ಎಂದರು. ಈ ಬೇಡಿಕೆಗಳಿಗೆ ಜಿಲ್ಲಾಡಳಿತ ಸ್ಪಂದಿಸಬೇಕು, ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಮಿತಿಯ ಸಂಚಾಲಕ ಅಮೃತ ಅವರು ಸಮಿತಿಯ ಕಾರ್ಯ ಸಾಧನೆಗಳು ಹಾಗೂ ಸುಸಂಘಟನಾತ್ಮಕ ಹೋರಾಟಗಳ ಕುರಿತು ಸವಿಸ್ತಾರವಾಗಿ ಮಾತನಾಡಿದರು.ಸಭೆಯಲ್ಲಿ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿ ಮುಖಂಡರುಗಳಾದ ಯಾಸಿನ್, ಸಂಗಮೇಶ್, ಸಾಗರ್, ಪರಶುರಾಮ್, ಉದಯ್, ಕಿರಣ ಮುಂತಾದವರು ಹಾಜರಿದ್ದರು.
