ಉದಯವಾಹಿನಿ, ಗಂಗಾವತಿ: ಐತಿಹಾಸಿಕ ಪ್ರಸಿದ್ಧ ಹಾಗೂ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆನೇಗೊಂದಿ ಉತ್ಸವ ಮಾರ್ಚ್ 11 ಮತ್ತು 12 ರಂದು ಅದ್ದೂರಿಯಾಗಿ ನಡೆಯಲಿದೆ ಎಂದು ಶಾಸಕ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.
ನಗರದ ನಗರಸಭೆ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕರು, ಉತ್ಸವ ಆಚರಣೆಗೆ ಸರಕಾರ 5 ಕೋಟಿ ರೂ. ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ನಾಡಿನ ಇತಿಹಾಸ, ಕಲೆ, ಸಾಹಿತ್ಯ ಹಾಗೂ ಸಾಂಸ್ಕ್ರತಿಕ ಕ್ಷೇತ್ರಕ್ಕೆ ಹೆಸರುವಾಸಿಯಾದ ಆನೆಗೊಂದಿ ಕ್ಷೇತ್ರ ರಾಮಾಯಣ ಮತ್ತು ಮಹಾಭಾರತ ಗ್ರಂಥಗಳಲ್ಲಿ ಸಹ ಪ್ರಸ್ತಾಪಿಸಲಾಗಿದೆ. ಇಂತಹ ಇತಿಹಾಸ ಇರುವ ಆನೆಗೊಂದಿ ಉತ್ಸವ ಆಚರಣೆ ಅತ್ಯವಶ್ಯವಿದೆ. ಎರಡು ದಿನಗಳ ಕಾಲ ಕವಿ ಗೋಷ್ಠಿ, ಸಾಂಸ್ಕ್ರತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉತ್ಸವದಲ್ಲಿ ರಾಜಮನೆತನದವರ ಹೆಸರನ್ನು ವೇದಿಕೆಗೆ ಸೂಚಿಸಲಾಗಿದೆ. ಸ್ಥಳಿಯರ ಹಾಗೂ ಕ್ಷೇತ್ರದ ಜನರ ಸಹಕಾರ ಅದ್ದೂರಿಯಾಗಿ ಕಾರ್ಯಕ್ರಮ ನಡೆಯಲಿದೆ ಎಂದರು. ಈ ವೇಳೆ ಕೆ.ಆರ್.ಪಿ.ಪಿ ಪಕ್ಷದ ಮುಖಂಡರು ಇದ್ದರು.
