
ಉದಯವಾಹಿನಿ, ಮೈಸೂರು: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ. ಲಕ್ಷ್ಮಣ್ ತಿಳಿಸಿದರು.
ಚಾಮುಂಡಿಬೆಟ್ಟದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಕ್ಕೂ ಮುನ್ನ ಒಕ್ಕಲಿಗ ಜಾತಿ ಸರ್ಟಿಫಿಕೇಟ್ ಕೊಟ್ಟವರು ಯಾರೆಂಬ ಸಂಸದ ಪ್ರತಾಪಸಿಂಹ ಹೇಳಿಕೆಗೆ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದರು.
ಮೈಸೂರು ತಾಲೂಕು ತಹಸಿಲ್ದಾರ ಕೊಟ್ಟ ಒಕ್ಕಲಿಗ 3ಎ ಜಾತಿ ಪ್ರಮಾಣ ಪತ್ರವನ್ನು ಪ್ರದರ್ಶಿಸಿದ ಲಕ್ಷ್ಮಣ, ಜಾತಿಯನ್ನು ಯಾರೂ ಹಣೆಯ ಮೇಲೆ ಬರೆದುಕೊಳ್ಳುವುದಿಲ್ಲ ಎಂದರು.
ಚುನಾವಣೆ ರಂಗೇರಿದೆ. ಕಾಂಗ್ರೆಸ್ ಪರವಾಗಿ ಒಳ್ಳೇಯ ವಾತಾವರಣ ಸೃಷ್ಟಿಯಾಗುತ್ತಿದೆ. ಈಗ ಬಿಜೆಪಿಯವರು ಯಾವ ಹಂತಕ್ಕೆ ಬೇಕಾದರೂ ಹೋಗಲು ಸಿದ್ಧರಾಗಿದ್ದಾರೆ. ಯಾವ ಸುಳ್ಳನ್ನಾದರೂ ಹೇಳುತ್ತಾರೆ. ಒಕ್ಕಲಿಗ ಸಮುದಾಯ ಅಲ್ಲ ಅನ್ನುವುದಕ್ಕೆ ಏನದರೂ ದಾಖಲೆ ಸಲ್ಲಿಸಲಿ ಎಂದು ಒತ್ತಾಯಿಸಿದರು.
ಜಾತಿಯನ್ನು ಪ್ರಶ್ನಿಸುವ ಕೆಳ ಮಟ್ಟದ ರಾಜಕೀಯ ಮಾಡದಿರುವಂತೆ ಹಿಂದಿನ ಸಂಸದರಿಗೆ ಮನವಿ ಮಾಡುತ್ತೇನೆ. ಒಕ್ಕಲಿಗ ಸಮುದಾಯದ ಮತಗಳನ್ನು ಪಡೆಯುತ್ತೇನೆಂದು ನಾನು ಒಕ್ಕಲಿಗ ಅಲ್ಲ ಎನ್ನುತ್ತಿದ್ದಾರೆ ಎಂದರು.
ಒಕ್ಕಲಿಗ ಸಮುದಾಯದ ತುಳಸಿದಾಸಪ್ಪ ಬಳಿಕ 47 ವರ್ಷಗಳ ನಂತರ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಒಕ್ಕಲಿಗ ಸಮಾಜಕ್ಕೆ ಟಿಕೆಟ್ ಕೊಟ್ಟಿದ್ದಾರೆ. ನಾನು ಯಾವುದೇ ಜಾತಿಗೆ ಸೀಮಿತ ಅಲ್ಲ. ಎಲ್ಲ ಜಾತಿಯ ಮತದಾರರು ಬೇಕು. ಪ್ರತಿಯೊಬ್ಬರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು. ಮೈಸೂರು ಕೊಡಗು ಜಿಲ್ಲೆಗಳ ಒಕ್ಕಲಿಗರು 10 ವರ್ಷ ಪ್ರತಾಪಸಿಂಹಗೆ ಅವಕಾಶ ಮಾಡಿಕೊಟ್ಟಿದ್ದಾರೆ. ನನಗೂ ಒಂದು ಅವಕಾಶ ಮಾಡಿಕೊಡಬೇಕು. 10 ವರ್ಷಗಳ ಕಾಲ ಮೈಸೂರು ಯಾವ ವ್ಯವಸ್ಥೆಯಲ್ಲಿತ್ತು? ಎಷ್ಟು ಹಾಳು ಮಾಡಿಕೊಂಡಿದ್ದೇವೆ ಆಲೋಚಿಸಬೇಕು ಎಂದರು.ಗೆದ್ದು ಬಂದರೆ ಮೈಸೂರು -ಕೊಡಗು ಕ್ಷೇತ್ರವನ್ನು ಮಾದರಿಯಾಗಿ ರೂಪಿಸುತ್ತೇನೆ. ಪ್ರವಾಸೋದ್ಯಮ ಅಭಿವೃದ್ಧಿಪಡಿಸುತ್ತೇನೆ. ಐಟಿ ಸೆಕ್ಟರ್ ಉದ್ಯೋಗ ಅವಕಾಶ ಸೃಷ್ಟಿಸಲು ಅವಕಾಶ. ರಾಜ್ಯದಲ್ಲಿ 4 ವರ್ಷ ಕಾಂಗ್ರೆಸ್ ಸರ್ಕಾರ ಇರಲಿದ್ದು, ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಮಾಡಲು ಬದ್ಧನಾಗಿದ್ದೇನೆ ಎಂದು ತಿಳಿಸಿದರು.
