ಉದಯವಾಹಿನಿ, ಬೆಂಗಳೂರು: ಬೆಂಗಳೂರು ಮೆಟ್ರೊ ಕಾಮಗಾರಿಗೆ ಸಂಬಂಧಿಸಿದಂತೆ ಐದು ವರ್ಷಗಳ ಹಿಂದೆ ಬಂದ್ ಆಗಿದ್ದ ಎಂಜಿ ರಸ್ತೆ ಮತ್ತು ಕಬ್ಬನ್ ರಸ್ತೆಗೆ ಸಂಪರ್ಕ ಕಲ್ಪಿಸುವ ಕಾಮರಾಜ್ ರಸ್ತೆ ಜೂನ್ ಮೊದಲಾರ್ಧದಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ.

ರಸ್ತೆ ಸಂಚಾರಕ್ಕೆ ಮುಕ್ತವಾಗಿಸುವ ಮೊದಲು ಬಿಎಂಆರ್‌ಸಿಎಲ್ ಬೀದಿ ದೀಪಗಳು ಮತ್ತು ಮುನ್ನೆಚ್ಚರಿಕೆ ಫಲಕಗಳನ್ನು ಅಳವಡಿಸಬೇಕು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ನಾಗವಾರದಿಂದ ಕಾಳೇನ ಅಗ್ರಹಾರದ ಎಂಜಿ ರಸ್ತೆಯ ಅಂಡರ್ ಪಾಸ್ ಒಳಗೆ ಮೆಟ್ರೋ ನಿಲ್ದಾಣವನ್ನು ನಿರ್ಮಿಸಲು 220 ಮೀಟರ್ ಉದ್ದದ ಕಾಮರಾಜ್ ರಸ್ತೆಯನ್ನು 2019ರ ಜೂನ್‌ನಲ್ಲೇ ಮುಚ್ಚಲಾಗಿತ್ತು. ಈ ನಿಲ್ದಾಣವು ಅಸ್ತಿತ್ವದಲ್ಲಿರುವ ಪರ್ಪಲ್ ಲೈನ್‌ನೊಂದಿಗೆ ವರ್ಗಾವಣೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.
ಈ ಹಿಂದೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ರಸ್ತೆಯ ಅರ್ಧದಷ್ಟು ಭಾಗವನ್ನು ತೆರೆಯುವಂತೆ ಏಪ್ರಿಲ್ ಅಂತ್ಯದವರೆಗೆ ಗಡುವು ನೀಡಿತ್ತು. ಆದರೆ ಪ್ರಸ್ತುತ ಇದನ್ನು ಏಕಮುಖ ಮಾರ್ಗವನ್ನಾಗಿ ಮಾಡಲು ಸಂಚಾರಿ ಅಧಿಕಾರಿಗಳು ನಿರ್ಧರಿಸಿದ್ದಾರೆ. ಆ ಮೂಲಕ ವಾಹನಗಳು ಎಂಜಿ ರಸ್ತೆಯಿಂದ ಕಬ್ಬನ್ ರಸ್ತೆಯ ಕಡೆಗೆ ಮಾತ್ರ ಪ್ರಯಾಣಿಸಲು ಅನುವು ಮಾಡಿಕೊಡಲಾಗುತ್ತಿದೆ ಎಂದು ಜಂಟಿ ಪೊಲೀಸ್ ಕಮಿಷನರ್ (ಸಂಚಾರ) ಎಂಎನ್ ಅನುಚೇತ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!