ಉದಯವಾಹಿನಿ, ಬೆಂಗಳೂರು: ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ಅವರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಹುಡುಕಾಟ ನಡೆದಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭವನಾ ರೇವಣ್ಣ ಅವರನ್ನು ಬಂಧಿಸುವುದಕ್ಕಾಗಿಯೇ ಹುಡುಕಾಡಲಾಗುತ್ತಿದೆ. ಅವರು ಸಿಕ್ಕ ತಕ್ಷಣ ಕಾನೂನು ಪ್ರಕ್ರಿಯೆಗಳನ್ನು ಮುಂದುವರೆಸಲಾಗುವುದು. ಈವರೆಗೂ ಅವರು ಎಲ್ಲಿದ್ದಾರೆ ಎಂದು ಗೊತ್ತಿಲ್ಲ. ತಪ್ಪಿಸಿಕೊಂಡಿದ್ದಾರೆ. ಅರವಾಗಿಯೇ ಬಂದರೆ ಅಥವಾ ಹುಡುಕಿದಾಗ ಸಿಕ್ಕರೆ ಬಂಧಿಸುವುದು ಖಚಿತ ಎಂದರು.
ಚುನಾವಣೋತ್ತರ ಸಮೀಕ್ಷೆ ವಿಶ್ವಾಸಾರ್ಹವಲ್ಲ : ಲೋಕಸಭಾ ಚುನಾವಣೋತ್ತರ ಸಮೀಕ್ಷೆಗಳು ವಾಸ್ತವಕ್ಕೆ ಹತ್ತಿರವಾಗಿಲ್ಲ. ನಮ ಪಕ್ಷದ ವತಿಯಿಂದ ನಡೆಸಿರುವ ಆಂತರಿಕ ಸಮೀಕ್ಷೆ ಹಾಗೂ ಕಾರ್ಯಕರ್ತರ ವರದಿ ಆಧರಿಸಿದರೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ 295 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸವನ್ನು ಮಲ್ಲಿಕಾರ್ಜುನ ಖರ್ಗೆಯವರು ವ್ಯಕ್ತಪಡಿಸಿರುವುದು ಸರಿಯಿದೆ. ರಾಜ್ಯದಲ್ಲಿ ನಾವು ತಳಮಟ್ಟದಲ್ಲಿ ಕೆಲಸ ಮಾಡಿದ್ದೇವೆ. ಕನಿಷ್ಟ 17 ರಿಂದ 18 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದೇವೆ ಎಂದರು.ಜನರ ನಡುವೆ ಹೋರಾಡಿರುವ ನಮಗೆ ವಾಸ್ತವ ಗೊತ್ತಿದೆ. ರಾಜ್ಯಸರ್ಕಾರದ ಗ್ಯಾರಂಟಿ ಯೋಜನೆಗಳು ಕೈಹಿಡಿಯುತ್ತವೆ ಎಂದು ನಂಬಿದ್ದೇವೆ. ಚುನಾವಣೋತ್ತರ ಸಮೀಕ್ಷೆಗಳಲ್ಲಿ 3 ರಿಂದ 4 ಸ್ಥಾನ ಮಾತ್ರ ಗೆಲ್ಲಲಿದೆ ಎಂದು ಹೇಳಲಾಗಿದೆ. ಇದರ ಮೇಲೆ ನನಗೆ ನಂಬಿಕೆ ಇಲ್ಲ ಎಂದು ಹೇಳಿದರು.
