ಉದಯವಾಹಿನಿ, ಬೆಂಗಳೂರು: ಇಡೀ ರಾಷ್ಟ್ರದ ಗಮನಸೆಳೆದು ಹೈವೋಲ್ಟೇಜ್ ಕ್ಷೇತ್ರವೆಂದೇ ಪರಿಗಣಿತವಾಗಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ 13 ಅಭ್ಯರ್ಥಿಗಳು ನೋಟಾಗಿಂತಲೂ ಕಡಿಮೆ ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದಾರೆ.
ಮಂಜುನಾಥ್ ಮತ್ತು ಸುರೇಶ್ ಎಂಬ ಹೆಸರಿನ ಇತರೆ ಅಭ್ಯರ್ಥಿಗಳಿಗೂ ನೋಟಾಗಿಂತಲೂ ಕಡಿಮೆ ಮತಗಳು ದೊರೆತಿರುವುದು ವಿಶೇವಾಗಿದೆ.
ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹೃದಯ ತಜ್ಞ ಡಾ.ಸಿ.ಎನ್.ಮಂಜುನಾಥ್ 1079002 ಮತಗಳನ್ನು ಪಡೆದು ಒಟ್ಟಾರೆ ಶೇ.56.21ರಷ್ಟು ಮತ ಪಡೆದಿದ್ದಾರೆ. ಅಲ್ಲದೆ 2,69,647 ಮತಗಳ ಅಂತರದಿಂದ ಸಂಸದ ಡಿ.ಕೆ.ಸುರೇಶ್ ಅವರನ್ನು ಪರಾಭವಗೊಳಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸುರೇಶ್ ಅವರು 8,09,355 ಮತಗಳನ್ನು ಪಡೆದಿದ್ದು ಶೇ.42.16ರಷ್ಟು ಮತ ಪಡೆದಿದ್ದಾರೆ. ಆದರೆ ಉಳಿದ ಯಾವೊಬ್ಬ ಅಭ್ಯರ್ಥಿಯೂ ಠೇವಣಿ ಉಳಿಸಿಕೊಂಡಿಲ್ಲ. ನೋಟಾಗೆ 10,649 ಮತಗಳು ಚಲಾವಣೆಯಾಗಿವೆ. ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಅಭಿಷೇಕ್.ಕೆ 6202, ಪಕ್ಷೇತರ ಅಭ್ಯರ್ಥಿಗಳಾದ ಸುರೇಶ್.ಎಂ.ಎನ್ಗೆ 3236, ಹೇಮಾವತಿ.ಕೆ ಅವರಿಗೆ 1774, ಜಿ.ಟಿ.ಪ್ರಕಾಶ್ ಅವರಿಗೆ 1472, ಎನ್.ಕೃಷ್ಣಪ್ಪ 1402 ಮತಗಳು ದೊರೆತಿವೆ.
