ಉದಯವಾಹಿನಿ, ಬೆಂಗಳೂರು: ಆಂಧ್ರದಲ್ಲಿ ನಟ ಪವನ್ ಕಲ್ಯಾಣ್ `ಜನಸೇನಾ’ ಪಕ್ಷ ಭರ್ಜರಿ ಜಯ ಸಾಧಿಸಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಉಪ್ಪಿ ಪರ ಪೋಸ್ಟ್ವೊಂದು ಹರಿದಾಡುತ್ತಿದೆ. ‘ಪವನ್ ಕಲ್ಯಾಣ್ ಅವರನ್ನು ಗೆಲ್ಲಿಸಲು ಆಂಧ್ರ ಜನ 14 ವರ್ಷ ತಗೊಂಡ್ರು, ಉಪೇಂದ್ರ ಅವರನ್ನು ಗೆಲ್ಲಿಸಲು ಕನ್ನಡ ಜನ ಇನ್ನು ಎಷ್ಟು ವರ್ಷ ತಗೋತ್ತಾರೋ ಗೊತ್ತಿಲ್ಲ’ ಎಂಬ ಪೋಸ್ಟ್ ವೈರಲ್ ಆಗಿತ್ತು.
ಈ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ಚೇತನ್ ಅಹಿಂಸಾ ʻʻನಿಜ ಹೇಳಬೇಕೆಂದರೆ , ನೀವು (ಉಪೇಂದ್ರ) ಎಂದಿಗೂ ಬುದ್ಧಿವಂತರಾಗಿರಲಿಲ್ಲʼʼ ಎಂದು ಪರೋಕ್ಷವಾಗಿ ಉಪೇಂದ್ರ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.
‘ರಿಯಲ್ ಸ್ಟಾರ್’ ಉಪೇಂದ್ರ ಅವರು ಉತ್ತಮ ಪ್ರಜಾಕೀಯ ಪಕ್ಷದ ಮೂಲಕ ರಾಜಕೀಯದ ಕೆಲಸಗಳ ಕಡೆಗೆ ಗಮನ ಹರಿಸಿದ್ದಾರೆ. ಆದರೆ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಸೂಕ್ತ ಜನಬೆಂಬಲ ಸಿಕ್ಕಿಲ್ಲ.ಪವನ್ ಕಲ್ಯಾಣ್ ಅವರು ಜಯಭೇರಿ ಬಾರಿಸಿ ಬಳಿಕ ನೆಟ್ಟಿಗರು ಉಪೇಂದ್ರ ಅವರಿಗೆ ಹೋಲಿಕೆ ಮಾಡಿದ್ದಾರೆ. ಇದಾದ ಬಳಿಕ ಈ ಟ್ರೋಲ್ ಪೋಸ್ಟ್ಗೆ ಸ್ವತಃ ಉಪ್ಪಿ ಅವರೇ ಪ್ರತಿಕ್ರಿಯೆ ನೀಡಿ ʻʻವಾಹ್ ಮೈ ಡಿಯರ್ ಪ್ರಜಾಪ್ರಭುಗಳೇ ವಾಹ್.. ಉಪೇಂದ್ರ ಸೋಲು ಗೆಲುವು ಬಗ್ಗೆ ತುಂಬಾ ಚಿಂತೆ ಮಾಡ್ತಿದೀರ! ಎಂಥ ನಿಸ್ವಾರ್ಥ! ಎಂಥಾ ತ್ಯಾಗ ಮನೋಭಾವ! ನಿಮ್ಮೆಲ್ಲರ ಪಾದಕ್ಕೆ ಅಡ್ ಬಿದ್ದೆ. ಡೋಂಟ್ ವರೀ. ನಾನ್ ಗೆಲ್ಬೇಕು ಅಂತ ಅನ್ನಿಸಿದಾಗ ಯಾವುದಾದರೂ ರಾಜಕೀಯ ಪಕ್ಷ ಸೇರಿ ನೀವ್ ಹೇಳ್ದಾಗೆಲ್ಲಾ ಮಾಡ್ತೀನಿ. ಗೆದ್ದೇ ಗೆಲ್ತೀನಿ. ನೀವ್ ಗೆಲ್ಲೋದ್ ಯಾವಾಗ ಅಂತ ನೀವ್ ಯೋಚನೆ ಮಾಡ್ರಪ್ಪೋ…ನೆಕ್ಸ್ಟ್ ಎಲೆಕ್ಷನ್ನಲ್ಲಿ ನನಗ್ ಕೆಲ್ಸಾ ಕೊಡ್ತೀರ ಅಂದ್ರೆ ನಿಲ್ತೀನಿ. ಆಗ್ಲೂ ನೀವ್ ಎಮೋಷನಲ್ ಪ್ರಚಾರ ಮಾಡ್ರಿ. ಸಭೆ ಸಮಾರಂಭ ಎಲ್ಲಾ ಮಾಡ್ರಿ. ಕಷ್ಟ ಪಡ್ರಿ. ಆಮೇಲೆ ಐದು ವರ್ಷ ನೀವೇನ್ ಬೇಕಾದ್ರೂ ಮಾಡ್ಕಳಿ ನಾವ್ ಕೇಳಕ್ ಬರಲ್ಲ ಅಂದ್ರೆ. ಉಸ್.. ಏನ್ ಬರೀಬೇಕೋ ಗೊತ್ತಾಗ್ತಿಲ್ಲರಪ್ಪೋ. ಈ ದಡ್ ನನ್ ಮಗಂಗೇ ಯಾವೋನಾದ್ರು ಇನ್ಮೇಲೆ ಬುದ್ಧಿವಂತ ಅಂದ್ರೇ ಅಷ್ಟೇ… ಸೆಂದಾಗಿರಕ್ಕಿಲ್ಲ’ ಎಂದು ಉಪೇಂದ್ರ ಪೋಸ್ಟ್ ಮಾಡಿದ್ದರು.
