ಉದಯವಾಹಿನಿ, ಬೆಂಗಳೂರು: ಮಾರ್ಗದರ್ಶಿ ಚಿಟ್ ಫಂಡ್ ಡೆವಲಪ್ಮೆಂಟ್ ಆಫೀಸರ್ ಓರ್ವನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರಿನ ರಾಮಮೂರ್ತಿನಗರದಲ್ಲಿ ನಡೆದಿದೆ.
ಶ್ರೀಕಾಂತ್ ಕೆ.ವಿ (34) ಮೃತ ದುರ್ದೈವಿ. ಮಾಧವರಾವ್ ಕೊಲೆ ಮಾಡಿರುವ ಆರೋಪಿ. ಮಾಧವರಾವ್ ತನ್ನ ಮನೆಯಲ್ಲಿಯೇ ಶ್ರೀಕಾಂತ್ ನನ್ನು ಬರ್ಬರವಾಗಿ ಕೊಲೆಗೈದಿದ್ದು, ಬಳಿಕ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ.
ನಂತರದಲ್ಲಿ ಬೇರೆ ಬೇರೆ ಮೋರಿಗಳಲ್ಲಿ ದೇಹದ ತುಂಡುಗಳನ್ನು ಎಸೆದಿದ್ದಾನೆ.
ಸಾಕ್ಷ್ಯ ನಾಶಮಾಡುವ ಉದ್ದೇಶದಿಂದ ಈ ರೀತಿ ಮಾಡಿದ್ದು, ಪೊಲೀಸರು ಹಾಗೂ ನುರಿತ ತಜ್ಞರು ಮೂರು ದಿನಗಳಿಂದ ಮೃತದೇಹಕ್ಕಾಗಿ ಹುಡುಕಡಿದರೂ ಪತ್ತೆಯಾಗಿಲ್ಲ. ಮೇ 28ರಂದು ಬೆಳಿಗ್ಗೆ ಎಂದಿನಂತೆ ಮನೆಯಿಂದ ಹೊರಟಿದ್ದ ಶ್ರೀಕಾಂತ್ ವಾಪಾಸ್ ಆಗಿರಲಿಲ್ಲ. ಮೇ 29ರಂದು ಶ್ರೀಕಾಂತ್ ಪತ್ನಿ, ಪತಿ ನಾಪತ್ತೆಯಾಗಿರುವ ಬಗ್ಗೆ ಸಂಪಿಗೆಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಶ್ರೀಕಾಂತ್, ಕೆ.ಆರ್.ಪುರಂ ನ ವಿಜಿಪುರದಲ್ಲಿರುವ ಮಾಧವರಾವ್ ಮನೆಗೆ ಹೋಗಿರುವುದು ಪತ್ತೆಯಾಗಿದೆ. ಮನೆಯ ಸಿಸಿಟಿವಿಯಲ್ಲಿ ಶ್ರೀಕಾಂತ್ ಮಾಧವರಾವ್ ಮನೆ ಪ್ರವೇಶಿಸಿದ್ದು ಸೆರೆಯಾಗಿದ್ದು, ಮನೆಯಿಂದ ವಾಪಾಸ್ ಆಗಿರುವ ಬಗ್ಗೆ ರೆಕಾರ್ಡ್ ಇರಲಿಲ್ಲ. ಮನೆಯಲ್ಲಿ ಪರಿಶೀಲಿಸಿದಾಗ ರಕ್ತದ ಕಲೆಗಳು ಇದ್ದವು. ಆದರೆ ಮಾಧವರಾವ್ ನಾಪತ್ತೆಯಾಗಿದ್ದ.

Leave a Reply

Your email address will not be published. Required fields are marked *

error: Content is protected !!