ಉದಯವಾಹಿನಿ, ಬೆಂಗಳೂರು: ಸರ್ಕಾರದ ಬಿಟ್ಟಿ ಭಾಗ್ಯದಿಂದ ಸಂತುಷ್ಟರಾಗಿದ್ದ ನಗರದ ನಾಗರೀಕರ ಮೇಲೆ ಬಿಬಿಎಂಪಿ ಬರೆ ಎಳೆಯಲು ಮುಂದಾಗಿದೆ. ರಾಜಧಾನಿಯ ಪ್ರತಿ ಮನೆಗೂ ಮಾಸಿಕ 100 ಘನತ್ಯಾಜ್ಯ ಶುಲ್ಕ ವಿಧಿಸುವಂತೆ ಸರ್ಕಾರ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಸದ್ದಿಲ್ಲದೆ ತೆರಿಗೆ ಹೊರೆ ಹೊರಿಸಲು ಸನ್ನದ್ಧರಾಗಿದ್ದಾರೆ. ನಗರದ ಕಸ ವಿಲೇವಾರಿ ಸಮಸ್ಯೆಗೆ ಮುಕ್ತಿ ಹಾಡಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಕಳೆದ ವಾರವಷ್ಟೇ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯನ್ನು ರಚನೆ ಮಾಡಿತ್ತು.ಆ ಸಂಸ್ಥೆಯೇ ನಗರದ ಕಸ ವಿಲೇವಾರಿ, ಸಾಗಾಟ ಮತ್ತಿತರ ಕಾರ್ಯಗಳನ್ನು ಮಾಡುವಂತೆ ಸೂಚಿಸಿ ಕಸದ ಸಮಸ್ಯೆಯಿಂದ ಬಿಬಿಎಂಪಿಯನ್ನು ಹೊರಗಿಟ್ಟಿತ್ತು. ನಗರದ ಕಸದ ಸಮಸ್ಯೆಯನ್ನು ನಿವಾರಿಸಲು ಮುಂದಾಗಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಮೂಲಕವೇ ನೇರವಾಗಿ ಘನತ್ಯಾಜ್ಯ ಸೇವಾ ಶುಲ್ಕ ವಸೂಲಿ ಮಾಡೋಕೆ ಸರ್ಕಾರ ತೀರ್ಮಾನಿಸಿದೆ.
ಕಳೆದ ನಾಲ್ಕು ವರ್ಷದಿಂದ ಘನತ್ಯಾಜ್ಯ ಶುಲ್ಕ ವಿಧಿಸುವ ಚರ್ಚೆ ನಡೆದಿತ್ತು ಆದರೆ ಅದಕ್ಕೆ ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಅದನ್ನು ಕೈ ಬಿಡಲಾಗಿತ್ತು. ಇದೀಗ ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ವತಿಯಿಂದಲೇ ಮಾಸಿಕ 100 ರೂ.ಗಳ ತೆರಿಗೆ ವಸೂಲಿಗೆ ನಿರ್ಧರಿಸಲಾಗಿದೆ.
ದೇಶದ ಇತರ ಕೆಲವು ನಗರಗಳಲ್ಲಿ ಘನತ್ಯಾಜ್ಯ ಶುಲ್ಕ ವಿಧಿಸುತ್ತಿರುವುದನ್ನು ಅಧ್ಯಯನ ನಡೆಸಿ ಇಲ್ಲೂ ಕೂಡ ಕಸದ ಶುಲ್ಕ ವಸೂಲಿ ಮಾಡಬಹುದು ಎಂಬ ಬಗ್ಗೆ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ನೀಡಿರುವ ವರದಿಯನ್ನಾಧರಿಸಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.
ಈ ಮೊದಲು ವಿದ್ಯುತ್‌ ಬಿಲ್‌ ಮೂಲಕ 100 ರೂ.ಗಳ ಸೇವಾ ಶುಲ್ಕ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಆದರೆ ಇದೀಗ ಗಹ ಜ್ಯೋತಿ ಯೋಜನೆ ಹಿನ್ನೆಲೆ ಬಹುತೇಕ ಮಂದಿ ಬಿಲ್‌ ಪಾವತಿ ಮಾಡುತ್ತಿಲ್ಲದಿರುವುದನ್ನು ಮನಗಂಡು ಇನ್ನು ಮುಂದೆ ಆಸ್ತಿ ತೆರಿಗೆ ಜತೆಗೆ ಘನತ್ಯಾಜ್ಯ ಸೇವಾ ಶುಲ್ಕ ಸಂಗ್ರಹಿಸುವಂತೆ ಸರ್ಕಾರ ಬಿಬಿಎಂಪಿಗೆ ಸೂಚನೆ ನೀಡಿದೆ.

 

Leave a Reply

Your email address will not be published. Required fields are marked *

error: Content is protected !!